ಮಂಡ್ಯ: ಕಡು ಬಡತನ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಬಳಲಿದ್ದ ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಚಿಕ್ಕಬಳ್ಳಿಯ ರಾಜಣ್ಣ ಎಂಬುವರ ಪತ್ನಿ ಪ್ರಮೀಳಾ (43), ಪುತ್ರಿಯರಾದ ರಮ್ಯಾ (18), ರಶ್ಮಿ (16) ಎಂದು ಗುರುತಿಸಲಾಗಿದೆ. ಇವರು ಚಿಕ್ಕಬಳ್ಳಿ ಗ್ರಾಮದ ಬಳಿಯ ಕೆರೆಗೆ ಬಹುಶಃ ಶನಿವಾರ ರಾತ್ರಿ ಹಾರಿದ್ದಾರೆ. ಭಾನುವಾರ ಬೆಳಿಗ್ಗೆ ಶವಗಳು ಪತ್ತೆಯಾಗಿವೆ.
ರಾಜಣ್ಣ ಈಚೆಗೆ ಅನಾರೋಗ್ಯ ಪೀಡಿತರಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಡತನದ ಜತೆಗೆ ಇದರಿಂದಲೂ ಪ್ರಮೀಳಾ ಬೇಸತ್ತಿದ್ದರು. ಆತ್ಮಹತ್ಯೆಗೆ ಕಾರಣ ಇದೆಂದು ತಿಳಿದುಬಂದಿದೆ. ಕೂಲಿ ಕಾರ್ಮಿಕರಾಗಿದ್ದ ಇವರು ಬೆಂಗಳೂರಿನ ಸೋಮಸುಂದರಪಾಳ್ಯದಲ್ಲಿ ವಾಸಿಸುತ್ತಿದ್ದರು. ಸಂಕ್ರಾಂತಿಗಾಗಿ ಶನಿವಾರವಷ್ಟೇ ಊರಿಗೆ ಬಂದಿದ್ದರು.
ಮಕ್ಕಳಲ್ಲಿ ಒಬ್ಬಾಕೆ ಚನ್ನಪಟ್ಟಣದ ಅಜ್ಜಿ ಮನೆಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಗಳನ್ನು ಹೊರತೆಗೆಸಿ ಮರಣೋತ್ತರ ಪರೀಕ್ಷೆ ನಡೆಸಿದರು.