ಸಾಗರ: ಕೇವಲ ಮೂರು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ತಾಳಗುಪ್ಪ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಡಗಳಲೆ ಹುಚ್ಚಪ್ಪ ಅವರು ಮರಳಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹುಚ್ಚಪ್ಪ, ಕುಮಾರ್ ಬಂಗಾರಪ್ಪ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ದೊರಕಲಿಲ್ಲ ಎನ್ನುವ ಕಾರಣಕ್ಕೆ ಮನಸ್ಸಿಗೆ ನೋವಾಗಿ ಬಿಜೆಪಿಗೆ ಸೇರಿದ್ದೆ. ಆದರೆ ಬಿಜೆಪಿಯ ವಾತಾವರಣ ನೋಡಿದರೆ ಅಲ್ಲಿ ಒಂದು ವರ್ಗದ ಜನರಿಗೆ ಮಾತ್ರ ಮನ್ನಣೆ ಎಂಬ ಅರಿವಾಗಿ ಮತ್ತೆ ಕಾಂಗ್ರೆಸ್ಗೆ ಬಂದಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಈಗ ಕೆಜೆಪಿ ಮತ್ತು ಬಿಜೆಪಿ ಎಂಬ ಎರಡು ಗುಂಪುಗಳಾಗಿವೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಇದನ್ನು ಹತ್ತಿರದಿಂದ ನೋಡಿ ಮನಸ್ಸಿಗೆ ಬೇಸರವಾಗಿ ತಡ ಮಾಡುವುದಕ್ಕಿಂತ ಆದಷ್ಟು ಬೇಗ ಬಿಜೆಪಿ ತ್ಯಜಿಸುವುದು ಒಳ್ಳೆಯದು ಎನ್ನುವ ತೀರ್ಮಾನ ತೆಗೆದುಕೊಂಡಿರುವುದಾಗಿ ಹೇಳಿದರು.
ತಾಳಗುಪ್ಪ ಹೋಬಳಿಯ ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸೋಮಶೇಖರ್ ಬರದವಳ್ಳಿ ಮಾತನಾಡಿ, ಕುಮಾರ್ ಬಂಗಾರಪ್ಪ ಅವರಿಗೆ ಪಕ್ಷ ಟಿಕೆಟ್ ನೀಡದೇ ಇದ್ದಲ್ಲಿ ಎಲ್ಲಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಹೇಳಿದ್ದು ನಿಜ. ಕುಮಾರ್ ಬಂಗಾರಪ್ಪ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ನಮ್ಮ ಮುಂದಿನ ನಡೆ ನಿಂತಿದೆ. ಪಕ್ಷದೊಳಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಆಂತರಿಕ ಚುನಾವಣೆ ನಡೆದಿದ್ದರೆ ಕುಮಾರ್ ಅವರೆ ಆಯ್ಕೆ ಆಗುತ್ತಿದ್ದರು ಎಂದರು.
ಮುಖಂಡರಾದ ಮಹಾಬಲೇಶ್ವರ ಕುಗ್ವೆ, ಈಶ್ವರ ನಾಯ್ಕ್ ಕುಗ್ವೆ, ತಾರಾಮೂರ್ತಿ, ಕರುಣಾಕರ, ರಘುನಾಥ್ ಸೈದೂರು, ದಿನೇಶ್ ಬರದವಳ್ಳಿ ಹಾಜರಿದ್ದರು.