ಬಾಗಲಕೋಟೆ : ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎರಡು ಬಣಗಳ ಮಧ್ಯೆ ಘರ್ಷಣೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಾಗಲಕೋಟೆ ಎಸ್.ಪಿ ಲೋಕೇಶ ಜಗಲಾಸರ್ ಭೇಟಿ ನೀಡಿದರು.
ವಿದ್ಯಾರ್ಥಿಗಳನ್ನೊಳಗೊಂಡ ಎರಡು ಕೋಮಿನ ಸಂಘಟನೆಯ ಯುವಕರ ಗುಂಪುಗಳ ನಡುವೆ ಬೆಳಿಗ್ಗೆ ಘರ್ಷಣೆ. ಕಾಲೇಜಿನ ಆವರಣದಲ್ಲಿ ಕಲ್ಲು ತೂರಾಟ ನಡೆದಿತ್ತು.
ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಬೇಡಿಕೆ, ಹಕ್ಕೊತ್ತಾಯ ಇದ್ದರೆ ಶಾಂತ ರೀತಿಯಿಂದ ಪ್ರತಿಭಟನೆ ಮಾಡಬೇಕು. ಅನವಶ್ಯಕವಾಗಿ ಭವಿಷ್ಯ ಹಾಳು ಮಾಡಿಕೊಳ್ಳ ಬಾರದು. ಕ್ರಿಮಿನಲ್ ಮೊಕದ್ದಮೆ ದಾಖಲಾದರೆ ಭವಿಷ್ಯ ಹಾಳಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸದ್ಯಕ್ಕೆ ಬನಹಟ್ಟಿಯಲ್ಲಿ 144 ಜಾರಿ ಅವಶ್ಯಕತೆ ಇಲ್ಲ, ಬೆಳವಣಿಗೆ ನೋಡಿಕೊಂಡು ಅವಶ್ಯಕತೆ ಇದ್ದಲ್ಲಿ ಮಾಡಲಿದ್ದೇವೆ. ಮುಂದಿನ ಬೆಳವಣಿಗೆ ನೋಡಿಕೊಂಡು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.