ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಡೇ ರೈಡ್’‌ ಮುಗಿಸದೇ ಹೊರಟ ಕಾಕಾ!

Last Updated 13 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಂಜಾನೆ ತುಂತುರು ಮಳೆಯ ನಡುವೆಯೇ ಕೆರೂರಿನ ಅಮೃತ್ ಹೋಟೆಲ್‌ನಲ್ಲಿ ’ಸಂಡೆ ರೈಡ್‘‌ನ ನಿರುಮ್ಮಳ ಭಾವದಲ್ಲಿ ಹಿರಿ–ಕಿರಿಯರಿಗೆ ಕೀಟಲೆ ಮಾಡಿ ನಗುತ್ತಾ, ನಗಿಸುತ್ತಾ ಚಹಾ ಹೀರಿದ್ದ ವಿನೋದ್ ಕಾಕಾ ಇನ್ನಿಲ್ಲ ಎಂಬ ಸುದ್ದಿ ಬಾಗಲಕೋಟೆ ಸೈಕ್ಲಿಂಗ್ ಕ್ಲಬ್‌ನ ಗೆಳೆಯರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ತಾನೊಬ್ಬ ಮಾಜಿ ಶಾಸಕರ ಪುತ್ರ ಎಂಬ ಹಮ್ಮು–ಬಿಮ್ಮು ಎಲ್ಲದೇ ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಿದ್ದ ವಿನೋದ ಪಾಟೀಲ ಅಗಲಿಕೆ ಅವರ ಸೈಕಲ್‌ ಜೊತೆಗಾರರಿಗೆ ನಂಬಲು ಆಗುತ್ತಿಲ್ಲ.

’ಅವರು ಬಹಳ ಚೆನ್ನಾಗಿ ಸೈಕಲ್ ರೈಡ್ ಮಾಡುತ್ತಿದ್ದರು. ನಿತ್ಯ ನಾವು ಒಟ್ಟಿಗೆ ಹೋಗುತ್ತಿದ್ದೆವು. ಆದರೆ ಇಂದು ಅವರು ಸ್ವಲ್ಪ ಬೇಗನೇ ಹೊರಟಿದ್ದರು. ನಾವು ಮೂರು ಜನ ಸ್ವಲ್ಪ ತಡವಾಗಿ ಹೋಗಿದ್ದೆವು. ಅಮೃತ್‌ ಹೋಟೆಲ್‌ನಲ್ಲಿಯೇ ಎಲ್ಲರೂ ಜೊತೆಗೂಡಿದ್ದೆವು. ಅಲ್ಲಿ ಎಂದಿನಂತೆ ನಮಗೆ ಚೇಸ್ಟೆ ಮಾಡಿದ್ದಾರೆ. ಫೋಟೊ ಹೊಡೆಸಿಕೊಂಡರು‘ ಎಂದು ಸೈಕ್ಲಿಸ್ಟ್ ಸಿದ್ದು ಹಿರೇಮಠ ಭಾವುಕರಾದರು.

’ವಾಪಸ್ ಬರುವಾಗ ನಾವು ಸ್ವಲ್ಪ ಮುಂದೆ ಬಂದಿದ್ದೆವು. ಕೆರೂರು ಬಿಟ್ಟು 3 ಕಿ.ಮೀ ದೂರ ಬರುತ್ತಿದ್ದಂತೆಯೇ ವಿನೋದ ಅವರಿಗೆ ಹೃದಯಾಘಾತ ಆಗಿ ಸೈಕಲ್‌ನಿಂದ ಕೆಳಗೆ ಬಿದ್ದಿದ್ದಾರೆ. ಅವರೊಂದಿಗೆ ಇದ್ದ ಸೈಕ್ಲಿಸ್ಟ್ ಡಾ.ಗಿರೀಶ್ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅದು ಫಲಕಾರಿಯಾಗಿಲ್ಲ. ನಮಗೆ ಕರೆ ಮಾಡಿ ತಿಳಿಸಿದ್ದರಿಂದ ಎಲ್ಲರೂ ಸೈಕಲ್‌ಗಳನ್ನು ಅಲ್ಲಿಯೇ ಬಿಟ್ಟು ವಾಹನದಲ್ಲಿ ಸ್ಥಳಕ್ಕೆ ತೆರಳಿದೆವು. ಆ ಹೊತ್ತಿಗೆ ಅವರು ನಿಧನರಾಗಿದ್ದರು‘ ಎಂದು ಹಿರೇಮಠ ತಿಳಿಸಿದರು.

’ವಿನೋದ ಪಾಟೀಲ ಸೈಕ್ಲಿಂಗ್ ತಪ್ಪಿಸುತ್ತಿರಲಿಲ್ಲ. ಅವರ ಫಿಟ್‌ನೆಸ್ ಗುಟ್ಟು ಅದೇ ಆಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಸೈಕ್ಲಿಂಗ್ ಮಾಡುತ್ತಿದ್ದರು. ಸೈಕಲ್ ಪೆಡಲ್ ತುಳಿಯುತ್ತಲೇ ಅವರ ದಿನಚರಿ ಆರಂಭವಾಗುತ್ತಿತ್ತು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲೂ ಅವರು ಸೈಕ್ಲಿಂಗ್ ನಿಲ್ಲಿಸಿರಲಿಲ್ಲ‘ ಎಂದು ಮಾಜಿ ಅಂತಾರಾಷ್ಟ್ರೀಯ ಸೈಕ್ಲಿಸ್ಟ್ ಸಿದ್ದು ಸರ್ವರೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT