ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಆಕರ್ಷಣೆಯ ಕೇಂದ್ರ ಗೀರ್ ತಳಿ

ಮೋಟಗಿ ಬಸವೇಶ್ವರ ಜಾತ್ರೆಯಲ್ಲಿ ಕಿಲಾರಿ ಹೋರಿಗೆ ಲಕ್ಷ ಬೆಲೆ
Last Updated 12 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬಾಗಲಕೋಟೆ: ಕಂದು ಬಣ್ಣ ಗಿಡ್ಡದಾದ ಮೈ ಕಟ್ಟು, ದೊಡ್ಡ ತಲೆ ಬಾಗಿದ ಕೋಡಿನ ಗೀರ್ ತಳಿಯ ಆಕಳು ಮೋಟಗಿ ಬಸವೇಶ್ವರ ಜಾತ್ರೆಯ ಪ್ರಮುಖ ಆಕರ್ಷಣೆ.

ದೂರದ ಗುಜರಾತ್‌ನ ದೇಸಿ ತಳಿ ಗೀರ್ ಆಕಳಿನ ಎ–2 ಸತ್ವದ ಹಾಲು ಇತ್ತೀಚಿಗೆ ಹೆಚ್ಚು ಬೇಡಿಕೆ ಪಡೆಯುತ್ತಿದೆ. ಈ ಕಾರಣ ಗೀರ್ ಆಕಳು ನೋಡಲು ಹಾಗೂ ಖರೀದಿಸಲು ರೈತರು ಮುಗಿಬೀಳುತ್ತಿದ್ದಾರೆ.

ಮುರ್ರಾ ಎಮ್ಮೆ ಹಾಗೂ ಎಚ್.ಎಫ್ ಆಕಳಿನ ಅಬ್ಬರದಲ್ಲಿ ದೇಸಿ ತಳಿಗಳು ಕಾಣದಂತೆ ಮಾಯವಾಗಿದ್ದವು.
ಸದ್ಯ ಜನರಲ್ಲಿ ಜವಾರಿ ಆಕಳುಗಳ ಹಾಲಿನ ಮಹತ್ವ ಅರಿವಾಗುತ್ತಿರುವ ಹಿನ್ನೆಲೆಯಲ್ಲಿ ದೇಸಿ ಆಕಳಿಗೆ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲಿಯೇ ಹೆಚ್ಚು ಹಾಲು ನೀಡುವ ಗೀರ್‌ಗೆ ಬೇಡಿಕೆ ಹೆಚ್ಚಾಗಿದೆ.

ಬೇಡಿಕೆ ಹೆಚ್ಚಿರುವ ಕಾರಣ ಗುಜರಾತ್‌ನಿಂದ ಗೀರ್ ಆಕಳು ತಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ವಿಜಯಪುರ ಜಿಲ್ಲೆಯ ಚಡಚಣ ಹತ್ತಿರದ ಹಾವಿನಾಳ ಗ್ರಾಮದ ಒಟ್ಟು 6 ಜನ 30ಕ್ಕೂ ಹೆಚ್ಚು ಆಕಳನ್ನು ಮಾರಾಟಕ್ಕೆ ತಂದಿದ್ದೇವೆ ಎಂದು ದಲ್ಲಾಳಿ ಕೆಂಚಪ್ಪ ಪೂಜಾರಿ ಹೇಳಿದರು.

ದೇಸಿ ತಳಿಗಳಲ್ಲಿಯೇ ಹೆಚ್ಚು ಹಾಲು ನೀಡುವ ಗೀರ್‌ನ ಗಂಜಳದಲ್ಲಿ ಔಷಧಿಯ ಗುಣವಿದೆ. ಹೀಗಾಗಿ ರೈತರು ಅದನ್ನು ಕಾಮಧೇನು ಎಂದು ಕರೆಯುತ್ತಾರೆ. ಇಂತಹ ಗುಣ ಹೊಂದಿದ ಚಿಕ್ಕ ಕರುಗಳು ₹15 ರಿಂದ 22 ಸಾವಿರಕ್ಕೆ ಮಾರಾಟವಾಗುತ್ತಿವೆ. ಆಕಳು ₹40 ರಿಂದ 80 ಸಾವಿರದವರೆಗೆ ಮಾರಾಟವಾಗುತ್ತಿವೆ. ಈಗಾಗಲೇ ಐದಾರು ಆಕಳು ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.

ಎತ್ತಿನ ಜೋಡಿಗೆ ₹ 2.20 ಲಕ್ಷ: ನೋಡಲು ನೀಳ ಕಾಯ, ಎತ್ತರ ಹಾಗೂ ನೇರ ಕೋಡುಗಳು, ಉದ್ದನೆಯ ಹಣೆ ಹಾಗೂ ಹಾಲುಬಿಳುಪಿನ ಮೈಬಣ್ಣ ಹೊಂದಿದ ಆರು ಹಲ್ಲಿನ ಕಿಲಾರಿ ತಳಿ ಎತ್ತಿನ ಜೋಡಿಗೆ ಶಿರೂರಿನ ನಾಗಪ್ಪ ಅಚನೂರ ₹ 2.20 ಲಕ್ಷ ಬೆಲೆ ಇಟ್ಟಿದ್ದಾರೆ. ಕಿಲಾರಿ ತಳಿಯ ರಾಸಿನ ದುಡಿಮೆ ರೈತರ ಮೆಚ್ಚುಗೆ ಪಡೆದಿದೆ ಎಂದು ನಾಗಪ್ಪ ಹೇಳುತ್ತಾರೆ. ನಮ್ಮ ಗ್ರಾಮದಿಂದಲೇ ಹೆಚ್ಚು ಎತ್ತುಗಳನ್ನು ಮಾರಾಟಕ್ಕೆ ತರಲಾಗಿದೆ ಎಂದು ನಾಗಪ್ಪ ಹೇಳಿದರು.

ನಾಲ್ಕು ಹಲ್ಲಿನ ಎತ್ತಿಗೆ ₹ 60 ಸಾವಿರ
ಕಿಲಾರಿ ದನಗಳಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಬರುವುದಿಲ್ಲ. ಕಷ್ಟಪಟ್ಟು ದುಡಿಯುವ ಗುಣ ರೈತರಿಗೆ ಬಹಳ ಪ್ರೀತಿ. ನೋಡಲು ದಷ್ಟಪುಷ್ಟವಾದ ಈ ಎತ್ತುಗಳ ಕೊಳ್ಳಲು ರೈತರ ನಡುವೆ ಪೈಪೋಟಿ ಇರುತ್ತದೆ. ಅದರಿಂದಲೇ ನಾಲ್ಕು ಹಲ್ಲಿನ ನಮ್ಮ ಎತ್ತು ₹ 60 ಸಾವಿರಕ್ಕೆ ಮಾರಾಟವಾಗಿದೆ ಎಂದು ಶಿರೂರಿನ ಬಸಪ್ಪ ಕರಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT