ಬಾಗಲಕೋಟೆ: ‘ಬಾದಾಮಿ ಮಾತ್ರವಲ್ಲ, ರಾಜ್ಯದ ಇನ್ನೂ ಐದಾರು ಕಡೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕರೆಯುತ್ತಿದ್ದಾರೆ. ಅಂತಿಮವಾಗಿ ಹೈಕಮಾಂಡ್ನವರು ಎಲ್ಲಿ ನಿಲ್ಲಲು ಹೇಳುವರೋ ಅಲ್ಲಿ ಸ್ಪರ್ಧಿಸುವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಗುಳೇದಗುಡ್ಡ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಾದಾಮಿಯವರೂ ಕರೀತಾರೆ, ಚಾಮರಾಜಪೇಟೆ, ಕೊಪ್ಪಳ, ಕೋಲಾರ, ಹುಣಸೂರು, ಚಿಕ್ಕನಾಯಕಹಳ್ಳಿಯವರೂ ಕರೆಯುತ್ತಿದ್ದಾರೆ. ಆದರೆ ಎಲ್ಲಿ ನಿಲ್ಲಬೇಕು ಎಂಬುದರ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ’ ಎಂದರು.
‘ಚುನಾವಣೆ ಸಂದರ್ಭದಲ್ಲಿ ನಾನು ರಾಜ್ಯದ ತುಂಬೆಲ್ಲ ಓಡಾಡಿ ಪ್ರಚಾರ ಮಾಡಬೇಕಿದೆ. ಹೈಕಮಾಂಡ್ ಹೇಳಿದ ಕಡೆ ಸ್ಪರ್ಧಿಸುವೆ’ ಎಂದರು. ಆಗ ಸ್ಥಳದಲ್ಲಿದ್ದ ಬೆಂಬಲಿಗರು, ‘ನಮಗೆ ನೀವೇ ಹೈಕಮಾಂಡ್. ಬಾದಾಮಿಯಿಂದಲೇ ಸ್ಪರ್ಧಿಸಿ’ ಎಂದು ಒತ್ತಾಯಿಸಿದರು. ‘ನಿಮ್ಮ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡಿರುತ್ತೇನೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.