ರಬಕವಿ–ಬನಹಟ್ಟಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ದಿನ ಭಾರತೀಯರಿಗೆ ಶ್ರೇಷ್ಠವಾದ ದಿನವಾಗಿದೆ. ಇದೊಂದು ಸುವರ್ಣ ಗಳಿಗೆಯಾಗಿದೆ. ಭಾರತ ಅಷ್ಟೆ ಅಲ್ಲ ವಿಶ್ವವೇ ಇಂದು ಭಕ್ತಿ ಭಾವದಿಂದ ಕೂಡಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಇಲ್ಲಿನ ಮಂಗಳವಾರ ಪೇಟೆಯ ಹಳೆಯ ಗ್ರಂಥಾಲಯದ ಹತ್ತಿರ ಸೋಮವಾರ ಶ್ರೀರಾಮಚಂದ್ರನ ಮೂರ್ತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಇಂದು ವಿಶ್ವಗುರುವಾಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯನ ಕನಸಾಗಿತ್ತು. ನೂರಾರು ವರ್ಷಗಳ ಕನಸು ಇಂದು ನನಸಾಗಿದೆ. ದೇಶದ ಜನರು ಒಂದಾಗಿ ಇಂದು ಹಬ್ಬದಂತೆ ಈ ದಿನವನ್ನು ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ಮೊಳಗಿದ ಜೈ ಶ್ರೀರಾಮ ಘೋಷಣೆ: ಸೋಮವಾರ ಬೆಳಗಿನ ಜಾವದಿಂದಲೇ ನಗರದ ಅನೇಕ ಕಡೆಗಳಲ್ಲಿ ಜೈ ಶ್ರೀರಾಮ ಘೋಷಣೆ ಮೊಳಗಿತು. ನಗರದ ಸಿದ್ಧಾರೂಢ ಮಠದಲ್ಲಿ ಭಕ್ತರು ಬೆಳಿಗ್ಗೆ ಶ್ರೀರಾಮ ಭಜನೆ ನಡೆಸಿಕೊಟ್ಟರು. ನಗರದಲ್ಲಿ ಶ್ರೀರಾಮಚಂದ್ರರ ಭಾವಚಿತ್ರದ ಧ್ವಜಗಳು ಕಂಗೊಳಿಸುತ್ತಿದ್ದರೆ, ರಸ್ತೆಗಳು ರಂಗೋಲಿಯಿಂದ ಕಂಗೊಳಿಸುತ್ತಿದ್ದವು.