ಬಾಗಲಕೋಟೆ: ನಗರದ ಹಾನಗಲ್ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ವೈದ್ಯರು ನಿಗದಿತ ದಿನಕ್ಕಿಂತ ಮುಂಚಿತವಾಗಿ ಜನಿಸಿ ಪ್ರಾಣಾಪಾಯದಲ್ಲಿದ್ದ ಅವಳಿ ಶಿಶುಗಳಿಗೆ ಯಶಸ್ವಿ ಚಿಕಿತ್ಸೆ ನೀಡಿ, ಗುಣಮುಖರಾಗುವಂತೆ ನೋಡಿಕೊಂಡಿದ್ದಾರೆ.
ಆಸ್ಪತ್ರೆಗೆ ದಾಖಲಾದ ಮಹಿಳೆ ಹೃದಯದ ತೊಂದರೆಯಿಂದ ಬಳಲುತ್ತಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ನಲ್ಲಿಡಲಾಗಿತ್ತು. ಚಿಕಿತ್ಸೆ ಸಂದರ್ಭದಲ್ಲೇ ಸಿಜೇರಿಯನ್ ಮಾಡಲಾಗಿತ್ತು. ಜನಿಸಿದ ಸಂದರ್ಭ ಒಂದು ಮಗುವಿನ ತೂಕ 880 ಗ್ರಾಂ, ಇನ್ನೊಂದು ಮಗುವಿನ ತೂಕ 1.46 ಕೆ.ಜಿ ಇತ್ತು. ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತ್ತು.
ಮಕ್ಕಳಿಗೆ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ನೀಡಲಾಯಿತು. ಶಿಶುಗಳ ರಕ್ತ ಪರೀಕ್ಷೆಯಿಂದ ರಕ್ತದಲ್ಲಿ ಪೆಟ್ಯಾಸಿಯಂ ಲವಣಾಂಶ ಹೆಚ್ಚಿರುವುದು ಕಂಡುಬಂತು. ಪರಿಣಾಮ ಅತಿ ವಿರಳವಾದ ‘ನಾನ್-ಆಲಿಗುರಿಕ್ ಹೈಪರ್ಕಲೆಮಿಯಾ’ ಕಾಯಿಲೆಯಿಂದ ಬಳಲುತ್ತಿರುವುದನ್ನು ಗುರುತಿಸಿ ಅಗತ್ಯದ ಚಿಕಿತ್ಸೆ ನೀಡಲಾಯಿತು.
ಚಿಕ್ಕಮಕ್ಕಳ ತಜ್ಞರಾದ ಡಾ.ಗಂಗಾಧರ ಮಿರ್ಜಿ, ಡಾ.ಪಲ್ಲವಿ ಚರಂತಿಮಠ, ಡಾ.ಅನಿತಾ, ಡಾ.ಬೀಳಗಿ ಮತ್ತು ತಂಡದವರು ಯಶಸ್ವಿ ಚಿಕಿತ್ಸೆ ನೀಡಿ, ಮಕ್ಕಳನ್ನು ಉಳಿಸಿ ಪೋಷಕರ ಮೊಗದಲ್ಲಿ ನಗು ಮೂಡಿಸಿದ್ದಾರೆ.