ಬಾಗಲಕೋಟೆ: ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ನೌಕರರ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಾರ್ವಜನಿಕ ವಲಯದ ಬ್ಯಾಂಕ್ಗಳ ನೌಕರರು ವಿದ್ಯಾಗಿರಿಯ ಬ್ಯಾಂಕ್ ಆಫ್ ಬರೋಡಾ ಶಾಖೆಯ ಎದುರು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ‘ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣದಿಂದ ಸಾಮಾಜಿಕ ಬ್ಯಾಂಕಿಂಗ್ ವ್ಯವಸ್ಥೆ ಹಾಳುಗೆಡವಲು ಹೊರಟಿದೆ. ಉದ್ಯೋಗಿಗಳ ವೃತ್ತಿ ಭದ್ರತೆಗೆ ಖಾಸಗೀಕರಣದ ಕ್ರಮದಿಂದ ಬೆದರಿಕೆ ಹಾಕಿದಂತಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಸರ್ಕಾರ ಬಲಪಡಿಸಿ, ಬಾಕಿಯಿರುವ ಸಾಲ ಪಾವತಿಗೆ ಕ್ರಮ ಕೈಗೊಳ್ಳಬೇಕು. ಸಾಲ ಮರುಪಾವತಿ ಮಾಡದ ಕಾರ್ಪೊರೇಟ್ ಕಂಪನಿಗಳ ವಶಕ್ಕೆ ಬ್ಯಾಂಕ್ಗಳನ್ನು ನೀಡಬಾರದು’ ಎಂದು ಒತ್ತಾಯಿಸಿದರು.
ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಆನಂದ ಕುಲಕರ್ಣಿ, ಶ್ರೀನಿವಾಸ ಸಂಗಮ, ಆರ್.ಎಸ್.ಪಾಪನಾಳ, ವೆಂಕಟೇಶ ದೇಶಪಾಂಡೆ, ಪವನ್ ದೇಶಪಾಂಡೆ ಭಾಗವಹಿಸಿದ್ದರು.
ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವ್ಯತ್ಯಯ ವಾಯಿತು. ಚೆಕ್ ನಗದೀಕರಣ, ಡೆಪಾಸಿಟ್ ಸೇರಿದಂತೆ ನಾನಾ ಸೇವೆಗಳು ಲಭ್ಯವಾಗದೇ ಜನರು ಪರದಾಡಿದರು.