ಬಾದಾಮಿ: ‘ವಿಧಾನ ಸಭಾ ಮತಕ್ಷೇತ್ರದಲ್ಲಿ ಲಕ್ಷಕ್ಕೂ ಅಧಿಕ ಮತಗಳು ಪಿ.ಸಿ. ಗದ್ದಿಗೌಡರಿಗೆ ಬರುವಂತೆ ಮೈತ್ರಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಬಾಗಲಕೋಟೆ ಜಿಲ್ಲಾ ಘಟಕದ ಜೆಡಿಎಸ್ ಪಕ್ಷದ ಅಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಶನಿವಾರ ಬಾದಾಮಿ ಮತಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಮುಖಂಡರ ಹಾಗೂ ಕಾರ್ಯಕರ್ತರ ಸಮಾರಂಭದಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲ್ಲಿಸಲು ಕಾರ್ಯಕರ್ತರಿಗೆ ವಿನಂತಿಸಿದರು.
‘ಸಂಸದ ಪಿ.ಸಿ. ಗದ್ದಿಗೌಡರ್ ನಾಲ್ಕು ಬಾರಿ ಲೋಕಸಭೆ ಸದಸ್ಯರಾಗಿ ಕೇಂದ್ರ ಸರ್ಕಾರದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡಿದ್ದಾರೆ. ಐದನೇ ಬಾರಿ ಲೋಕಸಭೆಗೆ ಆಯ್ಕೆ ಮಾಡಲು ಎರಡೂ ಪಕ್ಷಗಳ ಕಾರ್ಯಕರ್ತರು ಪ್ರಯತ್ನಿಸಬೇಕು’ ಎಂದರು.
ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಲ್ಲ ಜನಪರ ಯೋಜನೆಗಳನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ವಿರೋಧ ಪಕ್ಷದವರು ಏನೂ ಕೆಲಸ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. 20 ವರ್ಷದಲ್ಲಿ ಮಾಡಿದ ಕೆಲಸದ ಬಗ್ಗೆ ಕೈಪಿಡಿ ಪ್ರಕಟಿಸಿರುವೆ ನೋಡಿ’ ಎಂದು ಸವಾಲು ಹಾಕಿದರು.
ಮಾಜಿ ಶಾಸಕ ರಾಜಶೇಖರ್ ಶೀಲವಂತ ಮಾತನಾಡಿ, ‘ದಶಕದ ಅವಧಿಯಲ್ಲಿ ಮೋದಿ ಸರ್ಕಾರದಲ್ಲಿ ರಾಷ್ಟ್ರ ರಕ್ಷಣೆಯ ಜೊತೆಗೆ ರಸ್ತೆ ಅಭಿವೃದ್ಧಿ, ರೈಲ್ವೆ ಸ್ಟೇಶನ್ ನಿರ್ಮಾಣ, ರೈತರಿಗೆ, ಮಹಿಳೆಯರಿಗೆ, ಯುವಕರಿಗೆ, ಬಡವರಿಗೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಪಿ.ಸಿ. ಗದ್ದಿಗೌಡರಿಗೆ ಮತವನ್ನು ಚಲಾಯಿಸಿ ಅಧಿಕ ಮತಗಳಿಂದ ಅಯ್ಕೆ ಮಾಡಿ’ ಎಂದರು.
ಕೃಷ್ಣಾ ಕಾಡಾ ನಿಗಮದ ಮಾಜಿ ಅಧ್ಯಕ್ಷ ಬಿ.ಪಿ. ಹಳ್ಳೂರ, ತಾಲ್ಲೂಕು ಘಟಕದ ಜೆಡಿಎಸ್ ಅಧ್ಯಕ್ಷ ಪ್ರಕಾಶ ಗಾಣಿಗೇರ, ಮಹೇಶ ಬಿಜಾಪೂರ, ಹಾಂಸಿಪೀರಾ ಮುಲ್ಲಾ, ನಾಗರಾಜ ಕಾಚಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು.
ಮೈತ್ರಿ ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮತ್ತು ಬಿಜೆಪಿ ಮುಖಂಡ ಮಹಾಂತೇಶ ಮಮದಾಪೂರ ಅನುಪಸ್ಥಿತಿಯಲ್ಲಿದ್ದರು.
ಮೈತ್ರಿ ಪಕ್ಷಗಳ ಶಿವನಗೌಡ ಸುಂಕದ, ಮುತ್ತಣ್ಣ ಉಳ್ಳಾಗಡ್ಡಿ, ಚಂದ್ರಕಾಂತ ಶೇಖಾ, ಸಂಪತ್ಕುಮಾರ ರಾಟಿ, ಭಾಗ್ಯ ಉದ್ನೂರ, ಜಯಶ್ರೀ ದಾಸಮನಿ, ಪರಸಪ್ಪ ನಾಯ್ಕರ್, ಮಲ್ಲಣ್ಣ ಹಿರೇಹಾಳ, ಅನ್ವರಖಾನ್ ಪಠಾಣ, ಹುಚ್ಚೇಶ ಹದ್ದೆನ್ನವರ, ಸಮರ ಜಲಗೇರಿ ಇದ್ದರು.