ಬಾಗಲಕೋಟೆ: ಯಾರನ್ನುಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಯಾರು ಯಾವ ಜಾಗದಲ್ಲಿ ಇರಬೇಕೊ ಅಲ್ಲಿಯೇ ಇರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯತ್ನಾಳರನ್ನ ಮೆಂಟಲ್ ಆಸ್ಪತ್ರೆಗೆ ದಾಖಲಿಸಬೇಕು ಎಂಬ ದಿಂಗಾಲೇಶ್ವರ ಸ್ವಾಮೀಜಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
'ನಾನು ರಾಜಕಾರಣಿ ರಾಜಕಾರಣ ಮಾಡ್ತೀನಿ.ಅವರು ಧರ್ಮದ ಪೀಠದ ಕೆಲಸ ಮಾಡಬೇಕು. ಕಳ್ಳರನ್ನು, ಸುಳ್ಳರನ್ನ ಬೆಂಬಲಿಸಬಾರದು' ಎಂದು ಮಾರ್ಮಿಕವಾಗಿ ಹೇಳಿದರು.
ಹಿಂದುತ್ವ ಬಂದಾಗ ಲವ್ ಜಿಹಾದ್, ಗೋಹತ್ಯೆ ನಡೆದಾಗ ಖಾವಿ ಹಾಕಿದವರು ಪ್ರತಿಭಟನೆ ಮಾಡಬೇಕು. ಮಠಾಧೀಶರು ಎಂದರೆ ಎಲ್ಲರಿಗೂ ಒಂದೇ, ಅದನ್ನು ಬಿಟ್ಟು ಯತ್ನಾಳ ಸೇರಿದಂತೆ ಯಾರೋ ಒಬ್ಬ ವ್ಯಕ್ತಿಯನ್ನು ಬೆಂಬಲಿಸಬಾರದು.ಈ ಸಮಾನತೆ ಬಿಟ್ಟು ಹೋದರೆ ಅವರೇ ಮೆಂಟಲ್ ಆಸ್ಪತ್ರೆಗೆ ಹೋಗಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಜಾತಿ ಸಮೀಕರಣದಲ್ಲಿ ಡಿಸಿಎಂ ಹುದ್ದೆ ಕೊಡುವಂತಹ ಅನಿವಾರ್ಯತೆ ಆಗಿದೆ. ಡಿಸಿಎಂ ಸ್ಥಾನ ಅವಶ್ಯಕತೆ ಇದೆಯೋ ಇಲ್ಲವೋ ಅಂತ ಹೈಕಮಾಂಡ್ ನಿಣ೯ಯ ಮಾಡಲಿದೆ. ಬಿಜೆಪಿ ಅಧಿಕಾರದಲ್ಲಿ ಇರುವ ಬಹಳಷ್ಟು ರಾಜ್ಯಗಳಲ್ಲಿ ಡಿಸಿಎಂ ಹುದ್ದೆ ತೆಗೆಯುತ್ತಾ ಇದ್ದಾರೆ. ಡಿಸಿಎಂ ಹುದ್ದೆ ಬಗ್ಗೆ ನಮ್ಮ ಹೈಕಮಾಂಡ್ ಇನ್ನೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈ ಬಾರಿ ನಮ್ಮ ಹೈಕಮಾಂಡ್ ಬಿಗಿಯಾದ ಒಳ್ಳೆಯ ನಿಲುವು ತಳೆಯುತ್ತೇ ಅನ್ನೋ ವಿಶ್ವಾಸ ಇದೆ ಎಂದು ಯತ್ನಾಳ ಹೇಳಿದರು.