ಬಾಗಲಕೋಟೆ: ಜ್ವರ, ಶೀತ, ಉಸಿರಾಟದ ತೊಂದರೆಯಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅವರ ಗಂಟಲು ದ್ರವ ಮಾದರಿಯನ್ನು ಶನಿವಾರ ಜಿಲ್ಲಾ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಲಾಗಿತ್ತು. ಅಲ್ಲಿ ಕೋವಿಡ್-19 ಪಾಸಿಟಿವ್ ಬಂದಿದೆ. ಮತ್ತೊಮ್ಮೆ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತದೇಸಾಯಿ ಪ್ರಜಾವಾಣಿ ಗೆ ತಿಳಿಸಿದರು.
ಮೃತ 50 ವರ್ಷದ ವ್ಯಕ್ತಿ ಕಾರು ಚಾಲಕರಾಗಿದ್ದರು. ಇಲ್ಲಿನ ನವನಗರದ ಸೆಕ್ಟರ್ ನಂ 57ರ ನಿವಾಸಿ.
ಕೋವಿಡ್ ನಿಯಮದಂತೆ ಅಂತ್ಯಕ್ರಿಯೆ ನಡೆಸಲು ಆರೋಗ್ಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.