ಬಾಗಲಕೋಟೆ: ದಿನಸಿ ಅಂಗಡಿಗಳಲ್ಲಿ ನೂಕು ನುಗ್ಗಲು ತಡೆದು ಗ್ರಾಹಕರಲ್ಲಿ ನಿಗದಿತ ಅಂತರ ಕಾಯ್ದುಕೊಳ್ಳಲು ಗುರುತು ಹಾಕುವ ಮೂಲಕ ಹುನಗುಂದ ಪಟ್ಟಣದಲ್ಲಿ ಬುಧವಾರ ಅಧಿಕಾರಿಗಳು ಮಾದರಿ ಕಾರ್ಯಕ್ಕೆ ಮುನ್ನುಡಿ ಬರೆದರು.
ಉಪವಿಭಾಗಾಧಿಕಾರಿ ಕೆ.ಗಂಗಪ್ಪ ನೇತೃತ್ವದಲ್ಲಿ ಅಧಿಕಾರಿಗಳು ಪಟ್ಟಣದ ನಿವಾಸಿಗಳಲ್ಲಿ ಧ್ವನಿವರ್ಧಕದ ಮೂಲಕ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ನಂತರ ಪ್ರತಿ ಜನವಸತಿ ಪ್ರದೇಶದಲ್ಲಿ ಒಂದೊಂದು ದಿನಸಿ (ಕಿರಾಣಿ) ಅಂಗಡಿ ಗುರುತಿಸಿ ಅದರ ಎದುರು ಸುಣ್ಣದಲ್ಲಿ ಮಾರ್ಕ್ ಮಾಡಿ ಗ್ರಾಹಕರು ನಿಂತುಕೊಳ್ಳಬೇಕಾದ ಜಾಗ ಗುರುತಿಸಿದರು. ನಂತರ ಅದು ಪಾಲನೆಯಾಗುವಂತೆ ನೋಡಿಕೊಂಡರು.