ಬನಶಂಕರಿ (ಬಾದಾಮಿ): ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಎರಡದಂಡೆ ನೀರಾವರಿ ಕಾಲುವೆಗೆ ಬನಶಂಕರಿ ದೇವಾಲಯದ ಎದುರಿನ ಹರಿದ್ರಾತೀರ್ಥ ಪುಷ್ಕರಣಿಗೆ ಗುರುವಾರ ಸಂಜೆ ನೀರು ಹರಿದು ಬಂದಾಗ ಭಕ್ತರು ಸಂಭ್ರಮಿಸಿದರು.
ಪುಷ್ಕರಣಿಯಲ್ಲಿ ಶುಕ್ರವಾರ ಬೆಳಿಗ್ಗೆ ಒಂದು ಅಡಿಯಷ್ಟು ನೀರು ಸಂಗ್ರವಾಗಿತ್ತು. ಪುಷ್ಕರಣಿಯ ವಾಯವ್ಯ ಭಾಗದ ಕಾಲುವೆಯಿಂದ ನೀರು ಬರುವಾಗ ಭಕ್ತರು ಅಲ್ಲಿಯೇ ಸ್ನಾನ ಮಾಡುವುದು ಕಂಡು ಬಂದಿತು. ನೀರು ಇನ್ನೂ ಸಂಗ್ರಹವಾಗುತ್ತಿತ್ತು. ದೇವಾಲಯದ ಪಕ್ಕದ ಸರಸ್ವತಿ ಹಳ್ಳದಲ್ಲಿ ನೀರು ಬರುತ್ತಿತ್ತು. ಆದರೆ ಇಲ್ಲಿ ನೀರು ಕೆಳಗೆ ಇತ್ತು.
‘ಪಲ್ಯೇದ ಹಬ್ಬದ ದಿನ ಹೊಂಡಕ್ಕ ನೀರು ಬಂದಿದ್ದರ ಚೊಲೋ ಇತ್ರಿ. ಭಾಳ ಜನರು ನೀರಿಗೆ ಪರದಾಡಿದರು. ನಾವೆಲ್ಲ ಹೆಚ್ಚ ರೊಕ್ಕ ಕೊಟ್ಟ ನೀರು ತರಸೀವಿ. ಈಗರ ಬಂತಲ್ಲ ಎಂದು ಸಂತಸ ಆಗೈತ್ರಿ. ಜಳಕಾ ಮತ್ತ ಅರಬಿ ತೊಳೆಯಾಕ ಅನುಕೂಲಾತ್ರಿ’ ಎಂದು ಮುದ್ದೇಬಿಹಾಳ ವರ್ತಕ ಮಲ್ಲಿಕಾರ್ಜುನ ಹೇಳಿದರು.
ಬನದ ಹುಣ್ಣಿಮೆಗೆ ಯಲ್ಲಮ್ಮನ ಗುಡ್ಡದ ಜಾತ್ರೆಗೆ ಹೋದವರು ಮಾರನೇ ದಿನ ಬನಶಂಕರಿದೇವಿ ಜಾತ್ರೆಗೆ ಬರುವರು. ದೇವಿಯ ದರ್ಶನ ಪಡೆದು ಮಹಿಳೆಯರು ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳು ಮತ್ತು ಪುರುಷರು ಕೃಷಿಗೆ ಮತ್ತು ಎತ್ತುಗಳ ಅಲಂಕಾರದ ವಸ್ತುಗಳನ್ನು ಖರೀದಿಸುವರು.
ಮಹಿಳೆಯರು ಗೃಹೋಪಯೋಗಿ ವಸ್ತುಗಳ ಮಾರಾಟದ ಖರೀದಿ ಜೋರಾಗಿತ್ತು.
‘ವರ್ಸಾ ನಾವು ಯಲ್ಲಮ್ಮನ ಗುಡ್ಡಕ್ಕ ಹೋಗಿ ಬನಶಂಕರಮ್ಮನ ದರ್ಶನಕ ಬಂದು, ಮನೀಗೆ ಬೇಕಾದ ಸಾಮಾನು ಒಯ್ಯತೀವರಿ’ ಎಂದು ಕವಲೂರ ಗ್ರಾಮದ ಬಸಮ್ಮ ಹೇಳಿದರು.
ದೇವಿಯ ವಾರ ಶುಕ್ರವಾರವಾಗಿದ್ದರಿಂದ ಜಾತ್ರೆಯಲ್ಲಿ ದೇವಾಲಯದ ಆವರಣ ಮತ್ತು ರಸ್ತೆಯಲ್ಲಿ ಜನವೋ ಜನ ಇದ್ದರು. ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ –ವಹಿವಾಟು ನಡೆದಿತ್ತು.
ಜಾತ್ರೆಯಲ್ಲಿ ಮಂಗಳಮುಖಿಯರು ತಲೆಯ ಮೇಲೆ ದೀಪ ತುಂಬಿದ ಕೊಡವನ್ನು ಇಟ್ಟುಕೊಂಡು ನೃತ್ಯ ಮಾಡಿದರು
ಜಾತ್ರೆಯಲ್ಲಿ ರಥಬೀದಿ ಮಾರುಕಟ್ಟೆಯಲ್ಲಿ ಮಹಿಳೆಯರು ಬಿದಿರಿನ ರೊಟ್ಟಿ ಕೆರಸಿ ಬುಟ್ಟಿ ಖರೀದಿಸಿದರು
ರೈತರು ಎತ್ತುಗಳ ಅಲಂಕಾರಕ್ಕೆ ಮತ್ತು ಕೃಷಿಗೆ ಬೇಕಾದ ವಸ್ತುಗಳನ್ನು ಖರೀದಿಸಿದರು