ರಬಕವಿ ಬನಹಟ್ಟಿ: ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್ಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರು, ನೀರಿನ ಮಟ್ಟ ಪರಿಶೀಲಿಸಿದರು. ಪ್ರವಾಹದ ಪರಿಸ್ಥಿತಿ ಮತ್ತು ಪ್ರವಾಹದಿಂದ ತೊಂದರೆಗೆ ಒಳಗಾಗುವ ಗ್ರಾಮಗಳ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶುಕ್ರವಾರ ಕೃಷ್ಣಾ ನದಿಯಲ್ಲಿ 1.35 ಲಕ್ಷ ಕ್ಯುಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದ ಹೊರ ಹರಿವಿದೆ. ಜಲಾಶಯದಲ್ಲಿ 522.70 ಮೀಟರ್ ನೀರಿನ ಮಟ್ಟವಿದ್ದು, ಹರಿವು ಹೆಚ್ಚಿದ್ದ ಕಾರಣ ಜಲಾಶಯದಲ್ಲಿ ನೀರಿನ ಸಂಗ್ರಹ ಮಾಡುತ್ತಿಲ್ಲ.
‘ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಲಿದೆ’ ಎಂದು ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ ತಿಳಿಸಿದರು.
ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ–110 ಮಿ.ಮೀ, ನವುಜಾ–114 ಮಿ.ಮೀ, ಮಹಾಬಳೇಶ್ವರ– 93 ಮಿ.ಮೀ, ತರಾಳಿ–18 ಮಿ.ಮೀ, ವಾರಾಣಾ–43 ಮಿ.ಮೀ, ರಾಧಾನಗರಿ–97 ಮಿ.ಮೀ, ದೂಧಗಂಗಾ–84 ಮಿ.ಮೀ ಮಳೆಯಾಗಿದೆ. ರಾಜಾಪುರ ಬ್ಯಾರೇಜ್ನಿಂದ 1.05 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದೆ ಎಂದು ಹಿಪ್ಪರಗಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ.ಡಿ.ಎಚ್. ಹೂಗಾರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಬಟ್ಟಿಹಾಳ, ಪೌರಾಯುಕ್ತ ಜಗದೀಶ ಈಟಿ, ವಿ.ಎನ್. ನಾಯಕ, ಪ್ರಕಾಶ ಮಠಪತಿ, ಅಮಸಿದ್ದ ಬಿರಾದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.