ಬಾಗಲಕೋಟೆ: ಕಬ್ಬು ಸಾಗಣೆ ಮಾಡುತ್ತಿದ್ದ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಅಳಿಯನಿಗೆ ಹೆಣ್ಣು ನೋಡಲು ಹೊರಟಿದ್ದ ದಂಪತಿ ಸ್ಥಳದಲ್ಲಿಯೇ ಸಾವಿಗೀಡಾದ ದಾರುಣ ಘಟನೆ ಸೋಮವಾರ ತಾಲ್ಲೂಕಿನ ಕಲಾದಗಿ–ಕಾತರಕಿ ನಡುವಣ ರಸ್ತೆಯಲ್ಲಿ ನಡೆದಿದೆ.
ಹಿರೇಶೆಲ್ಲಿಕೇರಿಯ ಹನುಮಪ್ಪ ಲಕ್ಷ್ಮಪ್ಪ ನಾಯ್ಕರ್ (65), ರುದ್ರವ್ವ ನಾಯ್ಕರ್ (55) ಮೃತರು. ಅಪಘಾತದಲ್ಲಿ ಅಳಿಯ ಯಲ್ಲಪ್ಪ ಲಕ್ಷ್ಮಪ್ಪ ಚಿಗರಿ (25) ಹಾಗೂ ಮೊಮ್ಮಗಳು ಚಂದ್ರವ್ವ (13) ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋದರಳಿಯ ಯಲ್ಲಪ್ಪನಿಗೆ ಹೆಣ್ಣು ನೋಡಲು ಹನುಮಪ್ಪ ಹಾಗೂ ರುದ್ರವ್ವ ದಂಪತಿ ಆತನೊಂದಿಗೆ ಬೀಳಗಿ ತಾಲ್ಲೂಕಿನ ಜಾನಮಟ್ಟಿಗೆ ಹೊರಟಿದ್ದರು. ಮೂವರು ಹೋಗಬಾರದು ಎಂದು ಮೊಮ್ಮಗಳು ಚಂದ್ರವ್ವನನ್ನು ಜೊತೆಗೆ ಕರೆದೊಯ್ದಿದ್ದರು. ನಾಲ್ವರೂ ಒಂದೇ ಬೈಕ್ನಲ್ಲಿ ಹೊರಟಿದ್ದರು. ಬೈಕ್ ಟ್ರಾಕ್ಟರ್ನ ಹಿಂದೆ ಹೊರಟಿತ್ತು. ಪಕ್ಕದಲ್ಲಿ ಸಾಗುತ್ತಿದ್ದ ಟಂಟಂ ಓವರ್ಟೇಕ್ ಮಾಡಲು ಹೋದಾಗ ಆಯ ತಪ್ಪಿ ಬಿದ್ದು, ದಂಪತಿ ಟ್ರಾಕ್ಟರ್ ಚಕ್ರಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೇಹಗಳುಅಪಘಾತದ ತೀವ್ರತೆ ಬಿಂಬಿಸುತ್ತಿದ್ದವು. ಗಾಯದಿಂದ ನರಳುತ್ತಿದ್ದ ಚಂದ್ರವ್ವನ ಸ್ಥಿತಿಗೆ ನೆರೆದವರು ಮಮ್ಮಲ ಮರುಗಿದರು. ಸ್ಥಳದಲ್ಲಿ ಸೇರಿದ್ದ ಸಂಬಂಧಿಕರ ರೋದನ ಮುಗಿಲುಮುಟ್ಟಿತ್ತು.ಈ ಬಗ್ಗೆ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.