ಮುಧೋಳ: ‘ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಪ್ರತಿ ತಿಂಗಳು 2 ಟಿಎಂಸಿ ಅಡಿ ನೀರು ಹರಿಸುವ ವಾಡಿಕೆಯಂತೆ ಜನವರಿ ತಿಂಗಳಲ್ಲಿ ನೀರು ಹರಿಸಿಲ್ಲ. ನದಿಯಲ್ಲಿ ನೀರು ಇಲ್ಲದೆ 20 ದಿನಗಳಾದರು ಜಿಲ್ಲಾಡಳಿತ ಯಾವ ಕ್ರಮಕೈಗೊಂಡಿಲ್ಲ. ಘಟಪ್ರಭಾ ನದಿಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿ ನಗರದ ತಹಶೀಲ್ದಾರ್ ಕಚೇರಿ ಎದುರು ರೈತ ಮುಖಂಡರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಿದರು.
‘ಬರಗಾಲದಿಂದ ರೈತರು ತತ್ತರಿಸುತ್ತಿದ್ದಾರೆ. ಕುಡಿಯುವ ನೀರು ಇಲ್ಲದಂತಾಗಿದೆ. ಅಂತರ ಜಲಮಟ್ಟ ಕುಸಿತದಿಂದ ಜನರು ಕಂಗಾಲಾಗಿದ್ದಾರೆ. ಕಳೆದ 20 ದಿನದಿಂದ ನದಿಯಲ್ಲಿ ನೀರು ಇಲ್ಲದೆ ಬರಡಾಗಿದೆ. ಇದರಿಂದಾಗಿ ಮುಧೋಳ ನಗರ ಸೇರಿದಂತೆ ನದಿ ಪಾತ್ರದ 30 ಹಳ್ಳಿಗಳಿಗೆ ನೀರಿನ ಸಮಸ್ಯೆ ತಲೆದೋರಿದೆ. ಡಿ.11ರಂದು ನಡೆದ ಸಲಹಾ ಮಂಡಳಿ ಸಭೆಯ ನಿರ್ಣದಯದಂತೆ ಜನವರಿಯಿಂದ ಪ್ರತಿ ತಿಂಗಳು 2 ಟಿಎಂಸಿ ನೀರನ್ನು ಘಟಪ್ರಭಾ ನದಿಗೆ ಹರಿಸಬೇಕು. ಆದರೆ ಜಲಾಶಯದಲ್ಲಿ 31 ಟಿಎಂಸಿ ನೀರಿದ್ದರೂ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಪಾಲಿನ ನೀರನ್ನು ನಮಗೆ ಬಿಡುತ್ತಿಲ್ಲ’ ಎಂದು ಕಬ್ಬು ಬೆಳೆಗಾರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಾಗೇಶ ಸೊರಗಾಂವಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ, ಮುಖಂಡ ದುಂಡಪ್ಪ ಯರಗಟ್ಟಿ ಮುಂತಾದವರು ಆರೋಪಿಸಿದರು.
‘ಶುಕ್ರವಾರ ನೀರು ಹರಿಸಿ ರೈತರ ಬೆಳೆಗೆ ಅನುಕೂಲ ಕಲ್ಪಿಸಿಕೊಡದಿದ್ದರೆ ಶನಿವಾರ ಮುಂದಿನ ಹೋರಾಟದ ರೂಪರೇಶೆ ನಿರ್ಣಯಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಲಕ್ಷ್ಮಣ ಚಿನ್ನನ್ನವರ, ಭೀಮಶಿ ತೋಳಮಟ್ಟಿ, ಮಹೇಶಗೌಡ ಪಾಟೀಲ, ಸೂಗುರಪ್ಪ ಅಕ್ಕಿಮರಡಿ, ದುಂಡಪ್ಪ ನೀಲಿ ತಿಮ್ಮಣ್ಣ ಬಟಕುರ್ಕಿ ಸೇರಿದಂತೆ ಇತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.