ರಾಂಪುರ: ಸಮೀಪದ ಶಿರೂರ ಗ್ರಾಮದಲ್ಲಿ ಗುರುವಾರ ಸಿದ್ಧೇಶ್ವರ ದೇವರ ಜಾತ್ರೆ ಅತ್ಯಂತ ವೈಭವದಿಂದ ಜರುಗಿತು.
ಬೆಳಿಗ್ಗೆ ಸಿದ್ದೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಮತ್ತಿತರ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ನಂತರ ನಂದಿಧ್ವಜ ಹಾಗೂ ಕಳಸದ ಮೆರವಣಿಗೆ ನಡೆಯಿತು. ಸಂಜೆ 5 ಗಂಟೆಗೆ ಶಿವಯೋಗಾಶ್ರಮದ ಸಿದ್ಧಲಿಂಗ ಶ್ರೀಗಳು, ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಕೊಲ್ಲಾಪುರದ ಕೃಪಾನಂದ ಸ್ವಾಮೀಜಿ ಸಾನಿಧ್ಯ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಿದ್ಧೇಶ್ವರ ರಥೋತ್ಸವ ಅತ್ಯಂತ ವೈಭವದಿಂದ ಜರುಗಿತು.
ತೇರು ಸಾಗುತ್ತಿದ್ದಂತೆ ಭಕ್ತ ಸಮೂಹ ಉತ್ತತ್ತಿ, ಬೆಂಡು-ಬೆತ್ತಾಸ್, ಬಾಳೆಹಣ್ಣು, ಹೂ ಎಸೆದು ಭಕ್ತಿ ಸಮರ್ಪಿಸಿದರು. ಶಿರೂರ, ಬೆನಕಟ್ಟಿ, ಗುಳೇದಗುಡ್ಡ, ಮಲ್ಲಾಪುರ, ಬೂದಿನಗಡ, ನೀಲಾನಗರದಿಂದ ಬಂದಿದ್ದ ಜನರು ತೇರು ಎಳೆದು ಹರಕೆ ತೀರಿಸಿದರು.