ಬಾಗಲಕೋಟೆ: ಮುಸ್ಲಿಂ ಮೀಸಲಾತಿ ಪ್ರಮಾಣವನ್ನು ಶೇ 4 ರಿಂದ ಶೇ 7ಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಆಗ್ರಹಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರಾದ ಅಬ್ದುಲ್ಜಬ್ಬಾರ್ ಕಲಬುರ್ಗಿ, ಎ.ಎ. ದಂಡಿಯಾ, ‘ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಲ್ಲಿ ಮುಸ್ಲಿಂ ಸಮುದಾಯ ಹಿಂದುಳಿದಿದೆ’ ಎಂದು ಅವರು ತಿಳಿಸಿದರು.
‘ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 50 ರಿಂದ 69 ಕ್ಕೆ ಹೆಚ್ಚಿಸಲು ರಾಜ್ಯವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
‘ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗಗಳು ಮುಸ್ಲಿಂ ಸಮುದಾಯದಲ್ಲಿನ 17 ವೃತ್ತಿ ಗುಂಪುಗಳನ್ನು ಹಿಂದುಳಿದ ಜಾತಿಗಳು ಎಂದು ಗುರುತಿಸಿವೆ. ಮೀಸಲಾತಿ ಹೆಚ್ಚಾದರೆ, ಅವರಿಗೂ ಶಿಕ್ಷಣದಲ್ಲಿ ಒಳ ಮೀಸಲಾತಿ ನೀಡಬಹುದು’ ಎಂದರು.
‘ರಾಜ್ಯ ಸರ್ಕಾರವು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ₹500 ಕೋಟಿ ಅನುದಾನ ನೀಡಬೇಕು’ ಎಂದು ಆಗ್ರಹಿಸಿದರು.