ಜಮಖಂಡಿ: ಲಿಂಗ, ಜಾತಿ ತಾರತಮ್ಯ ಬಂದಾಗ ಪ್ರತಿಯೊಬ್ಬರೂ ಪ್ರತಿಭಟಿಸಿ ಸಾಮಾಜಿಕ ನ್ಯಾಯವ ಪಡೆದುಕೊಳ್ಳಬೇಕು ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ಕವಿತಾ ಉಂಡೋಡಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ಸಹಯೋಗದಲ್ಲಿ ಮಂಗಳವಾರ ನಡೆದ ಕಾನೂನು ಅರಿವು ನೆರವು ಹಾಗೂ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಗಾಳಿ, ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಬೇಡಿಕೆ ಇಟ್ಟು, ಅವುಗಳನ್ನು ಈಡೇರಿಸಿ ಅಭಿವೃದ್ಧಿ ಕಡೆಗೆ ಕರೆದೊಯ್ಯುವವರನ್ನು ಗುರುತಿಸಿ ಮತದಾನ ಮಾಡಬೇಕು. ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೆ ನ್ಯಾಯಯುತವಾಗಿ ಮತದಾನ ಮಾಡಬೇಕು. ಇದರಿಂದ ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯವಾಗುತ್ತದೆ ಎಂದರು.
ಪ್ರಾಂಶುಪಾಲ ಜೆ.ಪಿ.ದೊಡಮನಿ ಮಾತನಾಡಿ, ದೇವಸ್ಥಾನ ಕಟ್ಟಿದರೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ದೇವರು, ಧರ್ಮ ಹಿಂದೆ ಸರಿದು ನ್ಯಾಯ ಮುಂದೆ ಬರಬೇಕು. ನಮಗೆ ಇನ್ನೂ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಸಂವಿಧಾನದ ಆಶಯ ಇನ್ನೂ ಈಡೇರಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ವಕೀಲ ಆರ್.ಆರ್.ಕರೋಶಿ ಮಾತನಾಡಿ, ವಿಶ್ವವೇ ಒಂದು ಕುಟುಂಬ, ಪ್ರತಿಯೊಬ್ಬರಿಗೂ ಮೂಲ ಸೌಲಭ್ಯ ನೀಡುವುದೇ ಸಮಾನತೆ. ವಿಶ್ವದಲ್ಲಿ ಶೇ 60ರಷ್ಟು ಸಾಮಾಜಿಕ ಭದ್ರತೆ ಇಲ್ಲದೆ ದುಡಿಯುವ ವರ್ಗದವರಿದ್ದಾರೆ, ಸಾಕ್ಷರತೆ, ನೀರುದ್ಯೋಗ, ಜಾತಿ ವ್ಯವಸ್ಥೆ, ಲಿಂಗತಾರತಮ್ಯವನ್ನು ಹೋಗಲಾಡಿಸಬೇಕು ಎಂದರು.
ಪ್ರಧಾನ ದಿವಾಣಿ ನ್ಯಾಯಾಧೀಶ ಅಬ್ದುಲ್ ರೆಹಮಾನ ಎ ಮುಲ್ಲಾ ಮಾತನಾಡಿದರು. ವಿ.ಆರ್.ದಳವಾಯಿ, ಎಸ್.ಎಂ. ಕಾಯಿ ಇದ್ದರು. ರಾಜೇಶ ಜಾಧವ ಸ್ವಾಗತಿಸಿದರು. ವೈ.ವೈ.ಕೊಕ್ಕನವರ ನಿರೂಪಿಸಿ, ವಂದಿಸಿದರು.