ಮುದ್ದೇಬಿಹಾಳ: ಪಕ್ಕದ ಮನೆಯವರ ನೀಡುತ್ತಿದ್ದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಕೂಲಿ ಕಾರ್ಮಿಕ, ಮೋಮಿನ ಗಲ್ಲಿ ನಿವಾಸಿ ಮಹ್ಮದ್ಇಕ್ಬಾಲ್ ಅಬ್ದುಲ್ಅಜೀಜ್ ಮೋಮಿನ (34) ಹೊಸ ತರಕಾರಿ ಮಾರುಕಟ್ಟೆಯಲ್ಲಿ ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಕ್ಕದ ಮನೆಯವರು ನೀಡುತ್ತಿದ್ದ ಕಿರುಕುಳ, ಅಶ್ಲಿಲ ಶಬ್ದಗಳಿಂದ ನಿಂದನೆ, ಜೀವಬೆದರಿಕೆ ಹಾಕುತ್ತಿದ್ದರು. ಖಾದೀರಸಾಬ ಮೋಮಿನ, ಹಬೀಬಾ ಮೋಮಿನ, ಹಮೀದಾ ಮೋಮಿನ್ ಅವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಮೃತರ ಪತ್ನಿ ರೇಷ್ಮಾ ಮೋಮಿನ್ ದೂರು ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನ ಹಿರಿಯ ಸಹೋದರ ಅಬ್ದುಲ್ಹಮೀದ್ ಮೋಮಿನ್ ಗುರುವಾರ ಅನುಮಾನಾಸ್ಪದವಾಗಿ ಹೊಲದ ಹಳ್ಳದ ನೀರಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿರುವ ಬೆನ್ನಲ್ಲೇ ಈ ಘಟನೆ ಸಂಭವಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಸ್ತಿ ವಿವಾದವೇ ಈ ಘಟನೆಗಳಿಗೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.