ಬಾಗಲಕೋಟೆ: ನೂತನ ಸಂಸದರು ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕೆಲಸಗಳ ಕುರಿತು ಜನತು ಬೇಡಿ ಇಟ್ಟಿದ್ದಾರೆ.
ನಾಗನಾಪುರಕ್ಕೆ ಬಸ್ ನಿಲ್ದಾಣ ಕಲ್ಪಿಸಿ
ಮುಧೋಳ ತಾಲ್ಲೂಕಿನಲ್ಲಿನ ನಾಗನಾಪುರದಿಂದ ಮುಧೋಳ ಕಡೆ ಹೋಗುವ ಜನರಿಗೆ ಬಸ್ಗಾಗಿ ಕಾಯಲು ಸರಿಯಾದ ನಿಲ್ದಾಣದ ವ್ಯವಸ್ಥೆ ಇಲ್ಲ. ಇದರಿಂದ ಜನರು ಬೇಸಿಗೆಯ ಸಂದರ್ಭದಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ಒಂದು ಬಸ್ ನಿಲ್ದಾಣ ನಿರ್ಮಿಸಿ.
–ಪ್ರವೀಣ ಪಾಟೀಲ, ನಾಗನಾಪುರ
ಆಶ್ರಯ ಮನೆಗಳಲ್ಲಿ ನೀರು ಇಂಗುವ ವ್ಯವಸ್ಥೆ ಮಾಡಿ
ದಿನದಿಂದ ದಿನಕ್ಕೆ ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿದೆ. ಅದನ್ನು ತಡೆಯಲು ಪ್ರತಿಯೊಂದು ಮನೆಯಲ್ಲಿ ಎರಡು ಗಿಡಗಳನ್ನು ನೆಡಬೇಕು ಎಂಬ ಕಾನೂನು ಜಾರಿಗೆ ತರುವ ಜೊತೆಗೆ ಸರ್ಕಾರದಿಂದ ನೀಡುವ ಆಶ್ರಯ ಮನೆಗಳಲ್ಲಿ ಮಳೆ ನೀರು ಇಂಗುವ ವ್ಯವಸ್ಥೆ ಮಾಡಬೇಕು, ಇದರಿಂದ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಮಟ್ಟ ಸುಧಾರಿಸುತ್ತದೆ.
–ಉಮಾ ಮಡಿವಾಳರ, ಬಾಗಲಕೋಟೆ
ಮಹಿಳೆಯರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ
ಇತ್ತೀಚಿನ ದಿನಗಳಲ್ಲಿ ಯುವತಿಯರ ಹಾಗೂ ಮಹಿಳೆಯರಿಗೆ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮಹಿಳೆಯರು ಬಸ್ನಲ್ಲಿ ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಬಸ್ಗಳ ವ್ಯವಸ್ಥೆ ಮಾಡುವ ಜೊತೆಗೆ ಅದರಲ್ಲಿ ಮಹಿಳಾ ನಿರ್ವಾಹಕರನ್ನು ನಿಯೋಜಿಸಿ.
–ರಾಘವೇಂದ್ರ ದಾಸರ, ಕುಲಹಳ್ಳಿ
ಕ್ಷೇತ್ರದ ಜನರೊಂದಿಗೆ ಬೆರೆಯುವುದ ರೂಢಿಸಿಕೊಳ್ಳಿ
ಸಂಸದರು ಮೊದಲು ಕ್ಷೇತ್ರದ ಜನರೊಂದಿಗೆ ಬೆರೆಯುವುದನ್ನು ರೂಢಿಸಿಕೊಳ್ಳಬೇಕು. ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಸಂಚರಿಸುವ ಮೂಲಕ ಅಲ್ಲಿನ ಜನರ ಕಷ್ಟಗಳನ್ನು ಅರಿತು ಅವುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಜೊತೆಗೆ ಗುಳೇದಗುಡ್ಡ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿ.
–ಉದಯ ಕಂಠಿ,ಗುಳೇದಗುಡ್ಡ
ಬಾದಾಮಿ ಸ್ವಚ್ಛತೆಗೆ ಯೋಜನೆ ರೂಪಿಸಿ
ಐತಿಹಾಸಿಕ ತಾಣ ಬಾದಾಮಿಗೆ ತ್ವರಿತವಾಗಿ ಮೂಲ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಬಾದಾಮಿ ನಗರದ ಸುತ್ತಲಿನ ಪರಿಸರ ಮತ್ತು ಪಾರಂಪರಿಕ ತಾಣಗಳ ಸ್ವಚ್ಛತೆಗೆ ಹಾಗೂ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ. ನಗರದ ಪಾರಂಪರಿಕ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕ್ರತಿಯ ಉಳಿವಿಗಾಗಿ ಪ್ರೋತ್ಸಾಹ ನೀಡಿ, ಸಹಾಯಧನ ಒದಗಿಸಿ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಅಗತ್ಯ ನೆರವು ನೀಡುವ ಮೂಲಕ ಸ್ವಚ್ಛತೆಗೆ ಜಿಲ್ಲೆಯನ್ನು ಮಾದರಿಯನ್ನಾಗಿಸಿ.
– ಶ್ರೀಧರ ಪತ್ತೇಪೂರ, ಬಾದಾಮಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.