ಗುಳೇದಗುಡ್ಡ: ಆಹಾರ ಇಲಾಖೆಯಿಂದ ಅನ್ನಭಾಗ್ಯದ ಪಡಿತರ ಹಣ ಜಮಾ ಆಗಲು ಜನರು ತಮ್ಮ ವ್ಯಾಪ್ತಿಯ ಅಂಚೆ ಇಲಾಖೆಯಲ್ಲಿ ಐಪಿಪಿಬಿ ಉಳಿತಾಯ ಖಾತೆ ತೆರೆದು ಅಲ್ಲಿ ಎನ್.ಪಿ.ಸಿ.ಐ. ಲಿಂಕ್ ಮಾಡಿಸಿ ಅನ್ನಭಾಗ್ಯ ಹಣದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾಲ್ಲೂಕು ಆಹಾರ ನಿರೀಕ್ಷಕ ಮಂಜುನಾಥ ರೊಟ್ಟಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ನ್ಯಾಯಬೆಲೆ ಅಂಗಡಿ ಹಾಗೂ ಅಂಚೆ ಇಲಾಖೆ ಸಹಕಾರದೊಂದಿಗೆ ಪಡಿತರ ಅಂಗಡಿಗಳಲ್ಲಿ ಅಂಚೆ ಪೋಸ್ಟ್ ಮಾಸ್ಟರ್ ನೆರವಿನೊಂದಿಗೆ ಹಣ ಜಮಾ ಆಗದ ಪಡಿತರ ಗ್ರಾಹಕರ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ತೆರೆದು, ಖಾತೆಗೆ ಎನ್.ಪಿ.ಸಿ.ಐ. ಲಿಂಕ್ ಆಗದೇ ಅನ್ನಭಾಗ್ಯದ ಹಣ ಜಮಾ ಆಗಿಲ್ಲದವರು ತಮ್ಮ ಭಾಗದ ಅಂಚೆ ಇಲಾಖೆಯಲ್ಲಿ ಐಪಿಪಿಬಿ ಉಳಿತಾಯ ಖಾತೆ ತೆರೆದು ಎನ್.ಪಿ.ಸಿ.ಐ. ಲಿಂಕ್ ಮಾಡಿಸಬೇಕು. ಬಳಿಕವೇ ಗ್ರಾಹಕರ ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಅನ್ನಭಾಗ್ಯದ ಹಣ ಜಮಾ ಆಗುತ್ತದೆ ಎಂದರು.
ಹಣ ಜಮಾ ಆಗದೇ ಉಳಿದ ಪಡಿತರ ಗ್ರಾಹಕರನ್ನು ಕರೆಯಿಸಿ ಸುಮಾರು 40ಕ್ಕೂ ಹೆಚ್ಚು ಐಪಿಪಿಐ ಖಾತೆಗಳನ್ನು ತೆರೆಯಲಾಯಿತು. ಅಂಚೆ ಇಲಾಖೆ ಹಾಗೂ ನ್ಯಾಯಬೆಲೆ ಅಂಗಡಿಕಾರರು ಜಂಟಿಯಾಗಿ ನ್ಯಾಯ ಬೆಲೆ ಅಂಗಡಿಗೆ ನಡೆದುಕೊಂಡು ಬರಲು ಸಾಧ್ಯವಾಗದವರ ಮನೆಗೆ ತೆರಳಿ ಅಲ್ಲಿಯೇ ಅಂಚೆ ಖಾತೆ ಮಾಡಿಸಿದರು.
ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್, ನ್ಯಾಯಬೆಲೆ ಅಂಗಡಿಕಾರರಾದ ಕುಮಾರ ಅಂಗಡಿ, ಹನಮಂತ ಕೌಜಗನೂರ, ಮನೋಹರ ಕೋರ್ಪಡೆ, ರಾಜು ಹುಳಬುತ್ತಿ ಕುಮಾರ ಗಂಗಾವತಿ ಇದ್ದರು.