ಬಾದಾಮಿ: ಕುಡಿಯುವ ನೀರಿನ ಯೋಜನೆಗೆ ತಾಲ್ಲೂಕಿನ 13 ಗ್ರಾಮಗಳಿಗೆ ಹೆಚ್ಚುವರಿಯಾಗಿ ₹22.56 ಕೋಟಿ ಅನುದಾನ ಸರ್ಕಾರ ಮಂಜೂರಾತಿ ನೀಡಿದೆ. ಶೀಘ್ರವಾಗಿ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಈ ಹಿಂದೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಆಲಮಟ್ಟಿ ಜಲಾಶಯದಿಂದ ಮಂಜೂರು ಮಾಡಿದ್ದ ಶಾಶ್ವತ ಕುಡಿಯುವ ನೀರಿನ ಯೊಜನೆಯಲ್ಲಿ ಕೆರೂರ ಮತ್ತು ಬಾದಾಮಿ ಪಟ್ಟಣ ಮತ್ತು 16 ಗ್ರಾಮಗಳಿಗೆ ಸೇರಿದಂತೆ ₹227 ಕೋಟಿ ಮಂಜೂರು ಮಾಡಿದ್ದರು. ಇದಕ್ಕೆ ಹೆಚ್ಚುವರಿಯಾಗಿ ಮತ್ತೆ ₹22.56 ಕೋಟಿ ಆಡಳಿತಾತ್ಮಕವಾಗಿ ಅನುಮೋದನೆಯಾಗಿದೆ ಎಂದು ಸುದ್ದಿಗಾರರಿಗೆ ಭಾನುವಾರ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸಹಕಾರದಿಂದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮಂಜೂರಾಗಿದೆ ಎಂದರು.
ತಾಲ್ಲೂಕಿನಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿದ್ದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ತಾಲ್ಲೂಕಿನ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡ ಬಗ್ಗೆ ಪತ್ರಕರ್ತರು ಶಾಸಕರ ಗಮನ ಹರಿಸಿದಾಗ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಮುಂಬರುವ ಉತ್ತರ ಕರ್ನಾಟಕದ ಬನಶಂಕರಿ ದೇವಿ ಜಾತ್ರೆಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ ಮತ್ತಿತರ ಸೌಲಭ್ಯಗಳ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ಬನಶಂಕರಿ ದೇವಾಲಯದ ಪುಷ್ಕರಣಿಗೆ ಚರಂಡಿ ನೀರು ಬರದಂತೆ ಕ್ರಮಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ₹1 ಕೋಟಿ ಮಂಜೂರಾಗಿ ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಪ್ರಶ್ನಿಸಿದಾಗ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯನ್ನು ಕೇಳಿ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.
ಎಂ.ಎಚ್. ಚಲವಾದಿ, ಅಶೋಕ ಕೋಟನಕರ, ಶಿವು ಹಿರೇಮಠ, ಮಂಜುನಾಥ ಹೊಸಮನಿ, ಶಂಕರ ಕನಕಗಿರಿ ಇದ್ದರು.