ಮಹಾಲಿಂಗಪುರ: ‘ಭಾರತೀಯ ಸಂಸ್ಕೃತಿ ಅದ್ಭುತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ’ ಎಂದು ಮೈಗೂರಿನ ಶಿವಾನಂದಮಠದ ಗುರುಪ್ರಸಾದ ಸ್ವಾಮೀಜಿ ಹೇಳಿದರು.
ಸಮೀಪದ ಢವಳೇಶ್ವರ ಗ್ರಾಮದ ಢವಳನಾಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬಾಲಕಿಯರ ಸುಮೇಧಾ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬಾಲ್ಯವನ್ನು ತಾಯಿ ರಕ್ಷಣೆ ಮಾಡಬೇಕು. ಯೌವನದಲ್ಲಿ ದಾರಿ ತಪ್ಪುವ ಸಂದರ್ಭದಲ್ಲಿ ಮಹಾತ್ಮರು ಒಳ್ಳೆಯ ಬೋಧನೆ ಮಾಡಬೇಕು. ತಾರುಣ್ಯ ತುಂಬಿದ ಯುವಕರನ್ನು ಸಂಸ್ಕೃತಿಯತ್ತ ಒಯ್ಯಬೇಕು. ಮುಪ್ಪಿನಲ್ಲಿ ಪರಮಾತ್ಮ ರಕ್ಷಣೆ ಮಾಡಬೇಕು ಎಂದರು.
ಬೆಳಗಾವಿ ವಿಭಾಗ ಕಾರ್ಯವಾಹ ರಾಮಚಂದ್ರ ಏಡಕೆ ಮಾತನಾಡಿ, ನಾವೆಲ್ಲರೂ ಇನ್ನಷ್ಟು ವರ್ಷ ಬದುಕಬೇಕಿದೆ. ಹೀಗಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೇವಲ ಓದು ಜೀವನವಲ್ಲ, ಸಾಮಾನ್ಯ ಜ್ಞಾನ ಬರಲು ಮನೆ ಬಿಟ್ಟು ಹೊರಗಿರಬೇಕು ಎಂದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇಮನ್ ಗಿರಡ್ಡಿ, ಕೆ.ಜಿ.ನೇಗಿನಹಾಳ, ಸಿ.ವಿ.ದಾದನಟ್ಟಿ, ಪೂರ್ಣೇಶ ಮಠಪತಿ, ಪ್ರಮೋದ ಜಿ., ನಾರಾಯಣ ಚನ್ನಾಳ ಇದ್ದರು.