ಬಾಗಲಕೋಟೆ: ಶಿಕ್ಷಕ ಸಿಬ್ಬಂದಿಯ ಪ್ರತಿಭಟನೆಯಿಂದ ಬೇಸತ್ತ ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಕೆ.ಎಂ.ಇಂದಿರೇಶ, ಶುಕ್ರವಾರ ನಡೆದ ವಿ.ವಿಯ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಬಹಿರಂಗವಾಗಿಯೇ ಕಣ್ಣೀರು ಹಾಕಿದರು.
ಪದೋನ್ನತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿಯ ಧರಣಿ ಆರಂಭಿಸಿರುವ ಶಿಕ್ಷಕ ಸಿಬ್ಬಂದಿ, ಸಂಸ್ಥಾಪನಾ ದಿನ ಸಮಾರಂಭವನ್ನು ಬಹಿಷ್ಕರಿಸಿದ್ದರು.
ಉದ್ಘಾಟನಾ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಡಾ.ಕೆ.ಎಂ.ಇಂದಿರೇಶ, ’ವಿಶ್ವವಿದ್ಯಾಲಯದ ಆಧಾರ ಸ್ತಂಭ ಎನಿಸಿದ ಶಿಕ್ಷಕರೇ ಇಲ್ಲದೇ ಕಾರ್ಯಕ್ರಮ ನಡೆಯುತ್ತಿದೆ’ ಎನ್ನುತ್ತಾ ಕಣ್ಣೀರು ಹಾಕಿದರು. ಆಗ ವೇದಿಕೆ ಮೇಲಿದ್ದವರು ಕುಲಪತಿಯನ್ನು ಸಮಾಧಾನಪಡಿಸಿದರು.
‘ಪ್ರಾಧ್ಯಾಪಕರ ನ್ಯಾಯಯುತ ಬೇಡಿಕೆಗಳನ್ನು ವಿಶ್ವವಿದ್ಯಾಲಯ ಪರಿಗಣಿಸಲಿದೆ. ವ್ಯವಸ್ಥಾಪನಾ ಮಂಡಳಿಯವರೊಂದಿಗೆ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಹೇಳಿದ ಇಂದಿರೇಶ ತಮ್ಮ ಭಾಷಣ ಮುಗಿಸಿದರು.