ಹುನಗುಂದ: ಪಟ್ಟಣದ ಬಸವ ಮಂಟಪದಲ್ಲಿ ನಡೆದ ಹುನಗುಂದ ಹಾಗೂ ಇಳಕಲ್ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ವೀಣಾ ಕಾಶಪ್ಪನವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ವೀಣಾ ಬರಲಿದ್ದಾರೆ ಎಂಬ ಕಾರಣಕ್ಕೆ ಗಂಟೆಗೂ ಹೆಚ್ಚು ಕಾಲ ಕಾಯಲಾಯಿತು. ಆದರೆ, ಅವರು ಬಾರದ್ದರಿಂದ ಕೊನೆಗೆ ಕಾರ್ಯಕ್ರಮ ಆರಂಭಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ಮಾತನಾಡುವಾಗ, ಕಾಂಗ್ರೆಸ್ನ ಕಾರ್ಯಕರ್ತರು ವೀಣಾ ಅವರನ್ನು ಸಭೆಗೆ ಕರೆಯಿಸಬೇಕು ಎಂದು ಆಗ್ರಹಿಸಿದರು.
ಅದಕ್ಕುತ್ತರಿಸಿದ ಸಚಿವರು, ಮುಂದಿನ ಸಭೆಯಲ್ಲಿ ನಮ್ಮೊಂದಿಗೆ ಇರುತ್ತಾರೆ ಎಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಮುಖಂಡ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ವೀಣಾ ಕಾಶಪ್ಪನವರ ಆರೋಗ್ಯ ಸರಿಯಿರದ ಕಾರಣ ಬಂದಿಲ್ಲ. ಅವರು ಬರುವ ಬಗ್ಗೆ ಸಂಶಯ ಬೇಡ. ಮುಂದಿನ ದಿನಗಳಲ್ಲಿ ಬರಲಿದ್ದಾರೆ ಎಂದರು.