ಬಾಗಲಕೋಟೆ: ಕರ್ನಾಟಕ ರಾಜ್ಯೋತ್ಸವ ಆಚರಣೆಯಿಂದಾಗಿ ರಾಜ್ಯವೆಲ್ಲ ಬೆಳಗುತ್ತಿದ್ದರೆ, ಬಾಗಲಕೋಟೆಯ ನವನಗರ ಮಾತ್ರ ಕತ್ತಲದಲ್ಲಿ ಮುಳುಗಿತ್ತು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಗುತ್ತಿಗೆದಾರರ ಬಿಲ್ ಪಾವತಿಸಿಲ್ಲ ಎಂದು ಗುತ್ತಿಗೆದಾರರು ತಮ್ಮ ಸಿಬ್ಬಂದಿಯನ್ನು ಕೆಲಸಕ್ಕೆ ಕಳುಹಿಸದ ಕಾರಣ ಬೀದಿ ದೀಪಗಳು ಬೆಳಗಲಿಲ್ಲ.
ಬೀದಿ ದೀಪಗಳು ಬೆಳಗುವುದಷ್ಟೇ ಅಲ್ಲ, ಕುಡಿಯುವ ನೀರು ಸರಬರಾಜು ಮಾಡುವ ಸಿಬ್ಬಂದಿಯೂ ವೇತನ ಪಾವತಿ ಮಾಡದ್ದಕ್ಕೆ ಪ್ರತಿಭಟನೆ ಮಾಡಿದ್ದರಿಂದ ಎರಡು ದಿನಗಳಿಂದ ನೀರು ಸರಬರಾಜು ಆಗಿಲ್ಲ. ತ್ಯಾಜ್ಯ ವಿಲೇವಾರಿಗೂ ಅದೇ ಗತಿಯಾಗಿದ್ದು, ಎರಡು ದಿನಗಳಿಂದ ಕಸ ವಿಲೇವಾರಿಯಾಗಿಲ್ಲ.
ನವನಗರದ ಯುನಿಟ್ 1 ಮತ್ತು 2 ಅನ್ನು ನಗರಸಭೆ ಹಸ್ತಾಂತರಿಸಲು ಮುಂದಾಗಿರುವುದರಿಂದ ನೀರು ಸರಬರಾಜು, ಬೀದಿ ದೀಪ ಹಾಗೂ ತ್ಯಾಜ್ಯ ವಿಲೇವಾರಿ ಟೆಂಡರ್ ಕರೆಯಲು ಮುಂದಾಗಿಲ್ಲ. ಅವಧಿ ಮುಗಿದಿರುವುದರಿಂದ ಬಿಲ್ ಪಾವತಿಗೂ ಮುಂದಾಗುತ್ತಿಲ್ಲ. ಪರಿಣಾಮ ಗುತ್ತಿಗೆದಾರರು ಪದೇ ಪದೇ ಕೆಲಸ ಸ್ಥಗಿತಗೊಳಿಸುತ್ತಿದ್ದಾರೆ.
ತಿಂಗಳ ಹಿಂದಷ್ಟೇ ವಾರಗಟ್ಟಲೇ ಕಸ ವಿಲೇವಾರಿ ಸ್ಥಗಿತ ಮಾಡಲಾಗಿತ್ತು. ಆಗಾಗ ಜನರು ಪರದಾಡಿದ್ದರು. ಕೊನೆಗೆ ಶಾಸಕ ಎಚ್.ವೈ. ಮೇಟಿ, ಸರ್ಕಾರದಿಂದ ಬಿಲ್ ಕೊಡಿಸುವ ಭರವಸೆ ನೀಡಿ ಕೆಲಸ ಮುಂದುವರೆಸುವಂತೆ ಮಾಡಿದ್ದರು.
ಈ ನಡುವೆ ಶಾಸಕ ಮೇಟಿ ಅವರು, ಬೆಂಗಳೂರಿನಲ್ಲಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ, ಕೆಬಿಜೆಎನ್ಎಲ್ ಪಡೆದುಕೊಂಡಿರುವ ಬಿಟಿಡಿಎ ದಲ್ಲಿಟ್ಟಿದ್ದ ಕಾರ್ಪಸ್ ಫಂಡ್ ಅನ್ನು ಮರಳಿ ಕೊಡುವಂತೆ ಮನವಿ ಮಾಡಿದ್ದರು. ಸಚಿವರೂ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದರು.
ತಿಂಗಳ ಕಳೆದ ಮೇಲೆಯೂ ಬಿಲ್ ಪಾವತಿಯಾಗದ್ದರಿಂದ ಗುತ್ತಿಗೆದಾರರು ಬುಧವಾರದಿಂದ ಮತ್ತೆ ಕೆಲಸ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಜನರು ಪರದಾಡುವಂತಾಗಿದೆ.
ಶಾಸಕ ಎಚ್.ವೈ. ಮೇಟಿ ಅವರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ್ದಾರೆ. ಗುತ್ತಿಗೆದಾರರು ಶುಕ್ರವಾರದಿಂದ ಕೆಲಸ ಆರಂಭಿಸಲಿದ್ದಾರೆಮನ್ಮಧಯ್ಯ ಸ್ವಾಮಿ ಮುಖ್ಯ ಎಂಜಿನಿಯರ್ ಬಿಟಿಡಿಎ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.