ಬಾಗಲಕೋಟೆ: ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಂಪೂರ್ಣ ಹಾನಿಗೀಡಾದ ನಾಲ್ಕು ಅಂಗನವಾಡಿ ಹಾಗೂ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಿಕೊಡಲು ಬೆಂಗಳೂರಿನ ವಿಪ್ರೊ ಕಂಪೆನಿ ಮುಂದಾಗಿದೆ.
ಮಲಪ್ರಭಾ ನದಿ ಮುನಿಸಿಗೆ ತುತ್ತಾದ ಬಾದಾಮಿ ತಾಲ್ಲೂಕಿನ ತಳಕವಾಡ, ಬೀರನೂರು, ಮಣ್ಣೇರಿ ಮತ್ತು ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿದ್ದ ಮುಧೋಳ ತಾಲ್ಲೂಕಿನ ಡವಳೇಶ್ವರದಲ್ಲಿ ಈ ಹೊಸ ಕಟ್ಟಡಗಳು ತಲೆ ಎತ್ತಲಿವೆ.
ಪ್ರಕ್ರಿಯೆ ಆರಂಭ:’ವಿಪ್ರೊ ಕಂಪೆನಿಯ ಹಿರಿಯ ಅಧಿಕಾರಿ ಜಗನ್ನಾಥ್ ಅವರನ್ನೊಳಗೊಂಡ ತಜ್ಞರ ತಂಡ ಈಗಾಗಲೇ ಎರಡು ಬಾರಿ ಹಾನಿಗೀಡಾದ ಶಾಲೆಗಳನ್ನು ವೀಕ್ಷಿಸಿದೆ. ಹೊಸದಾಗಿ ಕಟ್ಟಡ ಕಟ್ಟಬೇಕಾದ ಜಾಗದ ವೀಕ್ಷಣೆ ಕೂಡ ಮಾಡಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳುತ್ತಾರೆ.
’ಶಾಲೆಗಳ ಪುನರ್ನಿರ್ಮಾಣಕ್ಕೆ ₹12 ಕೋಟಿವರೆಗೆ ವೆಚ್ಚ ಮಾಡುವುದಾಗಿ ಕಂಪೆನಿ ಪ್ರತಿನಿಧಿ ತಿಳಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಒಂದಷ್ಟು ಕಾನೂನಾತ್ಮಕ ಪ್ರಕ್ರಿಯೆ ಆಗಬೇಕಿದ್ದು, ಅವು ಪೂರ್ಣಗೊಂಡ ನಂತರ ಕೆಲಸ ಆರಂಭಿಸಲಿದ್ದಾರೆ’ ಎಂದು ಜಿಲ್ಲಾಡಳಿತ ಹಾಗೂ ದಾನಿಗಳ ನಡುವೆ ಸಮನ್ವಯಾಧಿಕಾರಿಯಾಗಿರುವ ಜಿಲ್ಲೆಯ ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ತಿಳಿಸಿದರು.
’ಕಟ್ಟಡ ಕಟ್ಟಿಕೊಡುವುದು ಮಾತ್ರವಲ್ಲ ಪೀಠೋಪಕರಣ, ಆಟದ ಮೈದಾನ, ಕಾಂಪೌಂಡ್, ಕಲಿಕಾ ಸಾಮಗ್ರಿ ವ್ಯವಸ್ಥೆ ಮಾಡಲಿದ್ದಾರೆ.ನಂತರ ಆ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ಮಾದರಿಯಾಗಿ ರೂಪಿಸಲು ತಾಂತ್ರಿಕ ನೆರವು ಒದಗಿಸಲಿದ್ದಾರೆ’ ಎಂದು ಹೇಳುತ್ತಾರೆ.