ಇದರೊಂದಿಗೆ ಭೀಮಾ ನಾಯ್ಕ ಅವರ ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕ ಸ್ಥಾನ, ರಾಯಚೂರು, ಬಳ್ಳಾರಿ, ಕೊಪ್ಪಳ (ರಾಬಕೊ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವೂ ಹೋಗಲಿದೆ.
2013, 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಭೀಮಾ ನಾಯ್ಕ ಅವರು ತಮ್ಮ ಪ್ರಮಾಣ ಪತ್ರದಲ್ಲಿ ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ದೃಢಪಡಿಸಿದ್ದಾರೆ. ಆದರೆ, ಅವರು ಆಯ್ಕೆಯಾದ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಂಘ ಅದರ ವ್ಯಾಪ್ತಿಗೆ ಬರುವುದಿಲ್ಲ. ಅಷ್ಟೇ ಅಲ್ಲ, ತಾನು ಅಡವಿ ಆನಂದದೇವನಹಳ್ಳಿ ನಿವಾಸಿ ಎಂದು ಸಾಬೀತುಪಡಿಸಲು ಜಮೀನು ಗುತ್ತಿಗೆ, ಮನೆ ಬಾಡಿಗೆಯ ಛಾಪಾ ಕಾಗದದ ಕರಾರು ಪತ್ರಗಳನ್ನು ಭೀಮಾ ನಾಯ್ಕ ಸಲ್ಲಿಸಿದ್ದಾರೆ. ಆದರೆ, ಅವುಗಳು ನೋಂದಣಿ ಆಗಿಲ್ಲ. ತಹಶೀಲ್ದಾರ್ ಕೂಡ ಭೀಮಾ ನಾಯ್ಕ ಅವರು ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ತಿಳಿಸಿದ್ದಾರೆ. ಹಾಗಾಗಿ ಅವರು ಸದಸ್ಯರಾಗಿ ಮುಂದುವರಿಯಲು ಅರ್ಹರಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸದಸ್ಯತ್ವ ರದ್ದಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.