ಚಾಂದ್ ಬಾಷ
ತೆಕ್ಕಲಕೋಟೆ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಈ ಬಾರಿಯ ಮುಂಗಾರು ಮಳೆ ತಡವಾದ್ದರಿಂದ ರೈತರು ಆತಂಕದಲ್ಲಿದ್ದರು. ಕೆಲವು ದಿನಗಳಿಂದ ಸುರಿದ ಉತ್ತಮ ಮಳೆ ಅವರಿಗೆ ತುಸು ನೆಮ್ಮದಿ ನೀಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಕಳೆದ ವರ್ಷ ಜುಲೈ ತಿಂಗಳ ಅಂತ್ಯಕ್ಕೆ ಭತ್ತದ ಬೆಳೆಗೆ ಎರಡು ಬಾರಿ ಗೊಬ್ಬರ ಹಾಕಿದ್ದ ರೈತರು ಈ ಬಾರಿ ಮಳೆ ಹಾಗೂ ನಾಲೆಗೆ ನೀರು ಬರುವುದು ತಡವಾಗಿದ್ದರಿಂದ ಆತಂಕಗೊಂಡಿದ್ದರು. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ತುಂಗಭದ್ರಾ ಜಲಾಶಯ ತುಂಬುವ ನಿರೀಕ್ಷೆಯಲ್ಲಿ ರೈತರು ಭತ್ತದ ಮಡಿಗಳನ್ನು ಮಾಡಿ, ನಾಟಿ ಮಾಡಲು ಅಣಿಯಾಗಿದ್ದಾರೆ.
ತಾಲ್ಲೂಕಿನಾದ್ಯಂತ ತುಂಗಭದ್ರಾ ಅಚ್ಚುಕಟ್ಟು ಭಾಗದಲ್ಲಿ ಭತ್ತವನ್ನು ಹೆಚ್ಚು ಬೆಳೆಯಲಾಗುತ್ತದೆ. ತಾಲ್ಲೂಕಿನಲ್ಲಿ 35,142 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಭತ್ತ ನಾಟಿಯ ಗುರಿ ಹೊಂದಲಾಗಿದೆ. ನದಿದಂಡೆ ಗ್ರಾಮಗಳ ರೈತರು ಪಂಪ್ಸೆಟ್ ಮೂಲಕ ನೀರು ಹರಿಸಿಕೊಂಡು ಈಗಾಗಲೇ ಭತ್ತದ ಸಸಿ ನಾಟಿ ಮಾಡಿದ್ದಾರೆ. ಇಲ್ಲಿ ಶೇ 18ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿದೆ.
ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಶೇ 93ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಕಾಲುವೆಗೆ ನೀರು ಹರಿಸಿದಲ್ಲಿ ಭತ್ತದ ನಾಟಿ ಕಾರ್ಯ ವೇಗ ಪಡೆಯಲಿದೆ.ಎಸ್. ಬಿ. ಪಾಟಿಲ್, ಸಹಾಯಕ ಕೃಷಿ ನಿರ್ದೇಶಕ, ಸಿರುಗುಪ್ಪ
ತುಂಗಭದ್ರಾ ಕೆಳಮಟ್ಟದ ಕಾಲುವೆ ಅವಲಂಬಿಸಿರುವ ರೈತರು ಸಸಿ ಮಡಿ ಹಾಕಿ, ಭೂಮಿ ಹದಗೊಳಿಸಿ, ಕಾಲುವೆ ನೀರಿಗಾಗಿ ಕಾಯುತ್ತಿದ್ದಾರೆ. 10–15 ದಿನಗಳಲ್ಲಿ ನಾಟಿ ಆರಂಭವಾಗುವ ನಿರೀಕ್ಷೆ ಇದೆ.
‘ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದ್ದು ರೈತರಿಗೆ ಖುಷಿಯಾಗಿದೆ, ಕುಡಿಯುವ ನೀರಿನ ಕೆರೆಗಳು ತುಂಬಿದ ತಕ್ಷಣ ಕೃಷಿ ಚಟುವಟಿಕೆಗೆ ನೀರು ಬಿಟ್ಟು ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ರೈತ ಮುಖಂಡ ಬೆಳಗಲ್ ಮಲ್ಲಿಕಾರ್ಜುನ ಆಗ್ರಹಿಸಿದರು.
18583 ಹೆಕ್ಟೇರ್ನಲ್ಲಿ ಬಿತ್ತನೆ
ತಾಲ್ಲೂಕಿನಲ್ಲಿ ಒಟ್ಟು 60735 ಹೆಕ್ಟೇರ್ ಕೃಷಿ ಭೂಮಿ ಇದೆ. ಅದರಲ್ಲಿ 40686 ಹೆಕ್ಟೇರ್ ನೀರಾವರಿ ಹಾಗೂ 20049 ಹೆಕ್ಟೇರ್ ಖುಷ್ಕಿ ಪ್ರದೇಶವಿದ್ದು ಈ ಬಾರಿ 18583 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದೆ. ಸೂರ್ಯಕಾಂತಿ ಮುಸುಕಿನ ಜೋಳ ಜೋಳ ಸಜ್ಜೆ ನವಣೆ ಮೆಣಸಿನ ಕಾಯಿ ಹತ್ತಿ ಕಬ್ಬು ಸೇರಿದಂತೆ ಈಗಾಗಲೇ ಶೇ 93ರಷ್ಟು ಬಿತ್ತನೆಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.