ಹೊಸಪೇಟೆ(ವಿಜಯನಗರ): ನಗರದ 7ನೇ ವಾರ್ಡ್ ಪಾಂಡುರಂಗ ದೇವಸ್ಥಾನದಿಂದ ಲಂಬಾಣಿ ತಾಂಡಾಕ್ಕೆ ತೆರಳುವ ರಸ್ತೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಸಂಚಾರ ದುಸ್ತರಗೊಂಡಿದೆ.
7ನೇ ವಾರ್ಡ್ ಮೂಲಕ ಸೇವಾಲಾಲ್ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪಾಂಡುರಂಗ ದೇವಸ್ಥಾನ ರಸ್ತೆ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆ(ಎಸ್ಸಿಪಿ) ಮತ್ತು ಗಿರಿಜನ ಉಪಯೋಜನೆ(ಟಿಎಸ್ಪಿ) ಅಡಿಯಲ್ಲಿ ಮಂಜೂರಾಗಿತ್ತು.
ದೇವಸ್ಥಾನ ಬಳಿಯ ರಸ್ತೆ ಮತ್ತು ಒಂದು ಬದಿಯ ಚರಂಡಿ ನಿರ್ಮಾಣ ಕಾಮಗಾರಿಯನ್ನು ಮಾರ್ಚ್ ತಿಂಗಳಲ್ಲಿ ಗುತ್ತಿಗೆದಾರರು ಪೂರ್ಣಗೊಳಿಸಿದ್ದಾರೆ. ಆದರೆ, ಲಂಬಾಣಿ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಣ್ಣನ್ನು ಅಗೆದು ಅದನ್ನು ಅಷ್ಟಕ್ಕೆ ಬಿಟ್ಟಿದ್ದಾರೆ. ಇದರಿಂದಾಗಿ ಬಹಳ ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯರು ಗೋಳು ತೋಡಿಕೊಂಡಿದ್ದಾರೆ.
ಅಪೂರ್ಣಗೊಂಡ ಕಾಮಗಾರಿಯಿಂದ ವಾಹನ ಸವಾರರು, ಪಾದಚಾರಿಗಳಿಗೆ ಬಹಳ ಸಮಸ್ಯೆ ಎದುರಾಗುತ್ತಿದೆ. ಸ್ವಲ್ಪ ಮಳೆ ಬಂದರೆ ರಸ್ತೆಯೆಲ್ಲ ಕೊಚ್ಚೆಯಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕಾಮಗಾರಿ ಮುಗಿಸಿ, ಸ್ಥಳೀಯರ ಬವಣೆ ದೂರ ಮಾಡಬೇಕೆಂದು ಒತ್ತಾಯಿಸಿದ್ದಾರೆ.