ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರ ಸಹಕಾರ ಸಂಘ: ಮರು ವಿಚಾರಣೆಯಲ್ಲೂ ಭೀಮಾ ನಾಯ್ಕ ಸದಸ್ಯತ್ವ ರದ್ದು

ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಂದ ಆದೇಶ
Last Updated 24 ಡಿಸೆಂಬರ್ 2020, 5:36 IST
ಅಕ್ಷರ ಗಾತ್ರ

ಹೊಸಪೇಟೆ: ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ದಾಖಲೆಗಳು ಖೊಟ್ಟಿ ಎಂದು ಮರು ವಿಚಾರಣೆಯಲ್ಲೂ ಸಾಬೀತಾಗಿರುವುದರಿಂದ ಹಗರಿಬೊಮ್ಮನಹಳ್ಳಿ ಶಾಸಕ ಎಲ್‌.ಬಿ.ಪಿ. ಭೀಮಾ ನಾಯ್ಕ ಅವರ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವವನ್ನು ರದ್ದುಗೊಳಿಸಿ ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ನ್ಯಾಯಾಲಯದ ನ್ಯಾಯಾಧೀಶ ಲಿಯಾಕತ್‌ ಅಲಿ ಅವರು ಬುಧವಾರ (ಡಿ.23) ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ ಭೀಮಾ ನಾಯ್ಕ ಅವರ ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕ ಸ್ಥಾನ ಹಾಗೂ ರಾಯಚೂರು– ಬಳ್ಳಾರಿ– ಕೊಪ್ಪಳ (ರಾಬಕೊ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವೂ ಕೈತಪ್ಪಿದೆ. ಗುರುವಾರ (ಡಿ.24) ಬಳ್ಳಾರಿಯಲ್ಲಿ ನಡೆಯಲಿರುವ ಕರ್ನಾಟಕ ಹಾಲು ಮಂಡಳದ ಸಾಮಾನ್ಯ ಸಭೆಯಲ್ಲೂ ಅವರು ಪಾಲ್ಗೊಳ್ಳುವಂತಿಲ್ಲ.

ಭೀಮಾ ನಾಯ್ಕ ಅವರ ಆಯ್ಕೆ ಪ್ರಶ್ನಿಸಿ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಕೆ. ಬಸವರಾಜ, ಆರ್‌. ನಾಗನಗೌಡ ಅವರು ಆಗಸ್ಟ್‌ 17ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

2013, 2018ರ ವಿಧಾನಸಭೆ ಚುನಾವಣೆ ವೇಳೆ ಭೀಮಾ ನಾಯ್ಕ ಅವರು ತಾವು ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಅವರ ಈ ಕ್ಷೇತ್ರ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಂಘದ ವ್ಯಾಪ್ತಿಯಲ್ಲಿ ಇರಲಿಲ್ಲ. ಅದಕ್ಕಾಗಿ ಅವರು ತಾನು ಅಡವಿ ಆನಂದದೇವನಹಳ್ಳಿ ನಿವಾಸಿ ಎಂದು ಸಾಬೀತುಪಡಿಸಲು ಜಮೀನು ಗುತ್ತಿಗೆ, ಮನೆ ಬಾಡಿಗೆಯ ಛಾಪಾ ಕಾಗದದ ಕರಾರು ಪತ್ರಗಳನ್ನು ಸಲ್ಲಿಸಿದ್ದರು. ಆದರೆ, ಅವುಗಳ ನೋಂದಣಿಯಾಗಿರಲಿಲ್ಲ. ತಹಶೀಲ್ದಾರ್‌ ಕೂಡ ಭೀಮಾ ನಾಯ್ಕ ಅವರು ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ದೃಢಪಡಿಸಿದ್ದರು. ಅವರ ಮತದಾರರ ಗುರುತಿನ ಚೀಟಿ ಮೇಲೆಯೂ ಇದೆ ವಿಳಾಸ ಇದೆ.

’ಇವೆಲ್ಲ ಕಾರಣಗಳಿಂದ ಭೀಮಾ ನಾಯ್ಕ ಅವರು ಅಡವಿ ಆನಂದದೇವನಹಳ್ಳಿಯ ಕಾಯಂ ನಿವಾಸಿಯಲ್ಲ ಎನ್ನುವುದು ದೃಢಪಟ್ಟಿದೆ. ಅವರು ಸದಸ್ಯರಾಗಿ ಮುಂದುವರಿಯಲು ಅರ್ಹರಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸದಸ್ಯತ್ವ ರದ್ದಾಗುತ್ತದೆ’ ಎಂದು ನ್ಯಾಯಾಧೀಶರು ಅಕ್ಟೋಬರ್‌ 6ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಭೀಮಾ ನಾಯ್ಕ ಅವರು ಧಾರವಾಡ ಹೈಕೋರ್ಟ್‌ ಪೀಠದ ಮೊರೆ ಹೋಗಿದ್ದರು. ನ್ಯಾಯಾಲಯವು ತಡೆಯಾಜ್ಞೆ ನೀಡಿ, ಮರು ವಿಚಾರಣೆ ನಡೆಸುವಂತೆ ತಿಳಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಮರು ವಿಚಾರಣೆ ನಡೆಸಿದ ಸಹಕಾರ ಸಂಘಗಳ ನ್ಯಾಯಾಲಯವು ಅವರ ಸದಸ್ಯತ್ವ ರದ್ದುಪಡಿಸಿ ಆದೇಶ ಹೊರಡಿಸಿದೆ.

‘ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದೆ ಎಂದು ಬಿಜೆಪಿ ಮುಖಂಡರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಈ ರೀತಿಯ ಕೆಲಸ ಮಾಡಿಸಿದ್ದಾರೆ. ಇದು ಬಹಳ ಕೀಳುಮಟ್ಟದ ರಾಜಕಾರಣ. ಸಹಕಾರಿ ಇಲಾಖೆಯ ಇತಿಹಾಸದಲ್ಲಿ ಎಂದೂ ಈ ರೀತಿಯ ಘಟನೆ ನಡೆದಿರಲಿಲ್ಲ. ಬಿಜೆಪಿ ಮುಖಂಡ ನೇಮರಾಜ ನಾಯ್ಕ ಅವರಿಗೆ ನೇರವಾಗಿ ನನ್ನನ್ನು ಎದುರಿಸುವ ಶಕ್ತಿ ಇಲ್ಲ. ಹೀಗಾಗಿ ಹಿಂಬಾಗಿಲಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಯ ಜನ ಎಲ್ಲವೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ನೇಮರಾಜ ನಾಯ್ಕ ಅವರಿಗೆ ನಿಜವಾಗಿಯೂ ಶಕ್ತಿಯಿದ್ದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲಿ’ ಎಂದು ಶಾಸಕ ಭೀಮಾ ನಾಯ್ಕ ಸವಾಲು ಹಾಕಿದ್ದಾರೆ.

* ಶಾಸಕ ಸೋಮಶೇಖರ್‌ ರೆಡ್ಡಿ, ಬಿಜೆಪಿ ಮುಖಂಡ ನೇಮರಾಜ ನಾಯ್ಕ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಈ ಕೆಲಸ ಮಾಡಿಸಿದ್ದಾರೆ. ಈ ಕುರಿತು ಮೇಲ್ಮನವಿ ಸಲ್ಲಿಸುವೆ.

–ಎಲ್‌.ಬಿ.ಪಿ. ಭೀಮಾ ನಾಯ್ಕ, ಶಾಸಕ ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT