ಬಳ್ಳಾರಿ: ಕೊಳಗಲ್ಲು ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಹಲವು ದಿನಗಳಿಂದ ವಿವಾದ ಮನೆ ಮಾಡಿತ್ತಾದರೂ, ‘ಗ್ರಾಮದ ವಾತಾವರಣ ಶಾಂತವಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಜಿಲ್ಲಾ ಉಪ ನಿರ್ದೇಶಕರು ವರದಿ ನೀಡಿದ್ದರು ಎಂಬ ಅಂಶ ಬಹಿರಂಗವಾಗಿದೆ.
ಇಲಾಖೆ ಅಧಿಕಾರಿಗಳು ‘ಪರಿಸ್ಥಿತಿ ಶಾಂತ’ವಾಗಿದೆ ಎಂದು ವರದಿ ನೀಡಿದ ಮರುದಿನವೇ ಗ್ರಾಮದಲ್ಲಿ ಘರ್ಷಣೆ ಸಂಭವಿಸಿದ್ದು, ಪೊಲೀಸ್ ಅಧಿಕಾರಿಗಳೇ ಕಲ್ಲೇಟಿಗೆ ಈಡಾಗಿ ಗಾಯಗೊಂಡಿದ್ದಾರೆ. ಗ್ರಾಮದಲ್ಲಿನ ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಆಗಲಿರುವ ಅನಾಹುತ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂಬ ಚರ್ಚೆ ನಡೆಯುತ್ತಿದೆ.
‘ಬಳ್ಳಾರಿ ತಾಲ್ಲೂಕಿನ ಕೊಳಗಲ್ ಗ್ರಾಮದಲ್ಲಿ ಎರ್ರಿತಾತ ದೇವಸ್ಥಾನದ ಪ್ರವೇಶಕ್ಕೆ ಪರಿಶಿಷ್ಟ ಜಾತಿಯವರನ್ನು ಬಿಡದೆ ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದಾರೆ. ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು‘ ಎಂದು ವೇಣುಗೋಪಾಲ್ ಮೌರ್ಯ ಎಂಬುವವರು ಏ. 6ರಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯು ಜಿಲ್ಲಾ ಉಪ ನಿರ್ದೇಶಕರಿಂದ ವರದಿ ಕೇಳಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಪ ನಿರ್ದೇಶಕರು ಸಹಾಯಕ ನಿರ್ದೇಶಕರನ್ನು ಸ್ಥಳಕ್ಕೆ ಕಳುಹಿಸಿದ್ದರು. ಸಹಾಯಕ ನಿರ್ದೇಶಕರು ನೀಡಿದ ಮಾಹಿತಿ ಆಧಾರದಲ್ಲಿ ಉಪ ನಿರ್ದೇಶಕರು ಇಲಾಖೆಯ ಆಯುಕ್ತರಿಗೆ ವರದಿ ನೀಡಿದ್ದರು. ಈ ವರದಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ಸದ್ಯದ ಈ ಘಟನೆಯ ಕುರಿತು ಡಿವೈಎಸ್ಪಿ ಜತೆಗೆ ಖುದ್ದಾಗಿ ದೂರವಾಣಿ ಮೂಲಕ ಮಾತನಾಡಿ, ಪರಿಶಿಷ್ಟ ಜಾತಿಯ ಸಮುದಾಯವರಿಗೆ ರಕ್ಷಣೆ ಒದಗಿಸಲು ಕೋರಿದ್ದೇನೆ. ‘ಈ ಘಟನೆಯಲ್ಲಿ ಪರಿಶಿಷ್ಟ ಜಾತಿಯ ಸಮುದಾಯದವರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ ಹಾಗೂ ಯಾವುದೇ ರೀತಿಯ ಅಸ್ಪೃಶ್ಯತೆ ಆಚರಣೆ ಆಗಿರುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.
‘ಪರಿಶಿಷ್ಟ ಜಾತಿಯ ಸಮುದಾಯದವರಿಗೆ ಮಠದ ಒಳಗಡೆ ಪ್ರವೇಶಕ್ಕೆ ಯಾವುದೇ ನಿರ್ಬಂದ ಹೇರಿಲ್ಲ ಹಾಗೂ ಯಾವುದೇ ರೀತಿಯ ಅಸ್ಪೃಶ್ಯತೆ ಆಚರಣೆ ಆಗಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಹಾಯಕ ನಿರ್ದೇಶಕರು ವರದಿ ನೀಡಿದ್ದಾರೆ. ಸದ್ಯ ಗ್ರಾಮದಲ್ಲಿ ಶಾಂತಿಯುತ ವಾತಾವರಣವಿದೆ’ ಎಂದು ಉಪ ನಿರ್ದೇಶಕರು ಇಲಾಖೆಯ ಆಯುಕ್ತರಿಗೆ ಏ. 6ರಂದು ಸಲ್ಲಿಸಿದ್ದ ವರದಿಯಲ್ಲಿ ಹೇಳಲಾಗಿದೆ.
ಇದರ ಬೆನ್ನಿಗೇ ನಡೆದ ಘರ್ಷಣೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಲಾಯಿತು. ಆದರೆ ಯಾವುದೇ ಅಧಿಕಾರಗಳ ಸಂಪರ್ಕ ಸಾಧ್ಯವಾಗಲಿಲ್ಲ.
ಎರ್ರಿತಾತ ದೇವಸ್ಥಾನ ಪ್ರವೇಶಕ್ಕೆ ಪರಿಶಿಷ್ಟರ ನಿರಾಕರಣೆ ಆರೋಪ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವೇಣುಗೋಪಾಲ್ ಮೌರ್ಯ ಕೊಳಗಲ್ಲು ಗ್ರಾಮದಲ್ಲಿ ಗುಂಪು ಘರ್ಷಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.