ಹೊಸಪೇಟೆ: ಪುರಂದರ ಸೇವಾ ಮಂಡಳಿ ವತಿಯಿಂದ ಹಂಪಿಯ ಪುರಂದರ ಮಂಟಪದಲ್ಲಿ ಸೋಮವಾರ ಪುರಂದರದಾಸರ ಆರಾಧನೋತ್ಸವ ಆಚರಿಸಲಾಯಿತು.
ಆರಾಧನೋತ್ಸವದ ಪ್ರಯುಕ್ತ ಸಾಮೂಹಿಕ ಭಜನೆ, ಗೀತಗೋಷ್ಠಿ , ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೋಟೆ ದತ್ತಮಂಡಳಿ: ಹೊಸಪೇಟೆಯ ಕೋಟೆ ದತ್ತ ಮಂಡಳಿ ಪುರಂದರರ ಆರಾಧನೋತ್ಸವ ಕಾರ್ಯಕ್ರಮವನ್ನು ಭಾವಚಿತ್ರ ಮೆರವಣಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವೈಭವದಿಂದ ಆಚರಿಸಲಾಯಿತು.
ಬೆಳಿಗ್ಗೆ ಧನ್ವಂತ್ರಿ ಹೋಮ, ವಿಶೇಷ ಪೂಜೆ ಮತ್ತು ಪುರಂದರರ ಗೀತಗಾಯನ, ಅನ್ನಸಂತರ್ಪಣೆ ನಡೆಯಿತು.
ದಾಸ ಸಾಹಿತ್ಯ ಪ್ರವಚನ
ಸಿರುಗುಪ್ಪ: ಪಟ್ಟಣದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಪ್ರ ಸಮಾಜದ ವತಿಯಿಂದ ಪುರಂದರ ದಾಸರ ಆರಾಧನಾ ಮಹೋತ್ಸವ ನಡೆಯಿತು. ಆರಾಧನೆ ಪ್ರಯುಕ್ತ ಬೆಂಗಳೂರಿನ ವಿದ್ವಾನ್ ಟಿ. ಮುರಳೀಧರ ಆಚಾರ್ ದಾಸ ಸಾಹಿತ್ಯ ಕುರಿತು ಪ್ರವಚನ ನೀಡಿದರು.
ಪುರಂದರದಾಸರು ಜನರ ಮಾತನ್ನೇ ಸಾಹಿತ್ಯ ರೂಪಕ್ಕಿಳಿಸಿ ಸಂಗೀತದ ಮೆರಗು ಕೊಟ್ಟರು. ವ್ಯಾಸ-ದಾಸ ಸಾಹಿತ್ಯಗಳೆಂಬ ಎರಡು ದಾರಿಗಳು ಪರಮಾತ್ಮನನ್ನು ಹೊಂದಲು ಯೋಗ್ಯವಾಗಿವೆ ಎಂದು ತಿಳಿಸಿದರು.
ದಾಸರ, ದೇವರನಾಮ ಸ್ಮರಣೆ, ಭಜನೆ ನಡೆದವು. ಇದೇ ಸಂದರ್ಭದಲ್ಲಿ ವಿದ್ವಾನ್ ಮುರಳೀಧರ ಆಚಾರ್ ಅವರನ್ನು ಗೌರವಿಸಲಾಯಿತು.
ವಿಪ್ರ ಸಮಾಜದ ಮುಖಂಡರಾದ ಬಿ. ಗುಂಡಾಚಾರ್, ಜೆ. ರಾಮಮೂರ್ತಿ ಆಚಾರ್, ಭುಜಂಗರಾವ್, ಶಾಮಾಚಾರ್, ಗೋಪಾಲರಾವ್, ಎಚ್.ಕೆ. ಗೋಪಾಲರಾವ್, ಕೃಷ್ಣಮೂರ್ತಿ ಕುಲಕರ್ಣಿ, ಎಚ್.ಕೆ. ವಸುಧೇಂದ್ರರಾವ್ ಮತ್ತು ವೇಣುಗೋಪಾಲಸ್ವಾಮಿ ಸತ್ಸಂಗದ ಸದಸ್ಯರು ಹಾಜರಿದ್ದರು.