ಹೊಸಕೋಟೆ: ‘ಆರೋಗ್ಯ ತಜ್ಞರ ಸೂಚನೆಯಂತೆ ಕೊರೊನಾ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚಾಗಿ ಬಾಧಿಸುತ್ತದೆ. ಹಾಗಾಗಿ, ಪೋಷಕರು ಎಚ್ಚರಿಕೆವಹಿಸಬೇಕು’ ಎಂದು ಸಚಿವ ಎಂಟಿಬಿ ನಾಗರಾಜ್ ಸಲಹೆ ನೀಡಿದರು.
ತಾಲ್ಲೂಕಿನ ಮುಗಬಾಳದಲ್ಲಿ ಬುಧವಾರ ಮಕ್ಕಳ ತಜ್ಞರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹಮ್ಮಿಕೊಂಡಿರುವ ಸರ್ಕಾರಿ ಕಾರ್ಯಕ್ರಮ ಇದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ ಕಾರ್ಯಕ್ರಮಕ್ಕೆ ದೇವನಹಳ್ಳಿಯಲ್ಲಿ ಚಾಲನೆ ನೀಡಿದ್ದಾರೆ ಎಂದರು.
ಮೂರನೇ ಅಲೆಯು ಪೌಷ್ಟಿಕತೆ ಕೊರತೆಯಿರುವ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಅದಕ್ಕಾಗಿ ಸರ್ಕಾರ ಅಂತಹ ಮಕ್ಕಳನ್ನು ಪ್ರತಿ ಗ್ರಾಮದಲ್ಲಿ ಪ್ರಾರಂಭದಲ್ಲಿಯೇ ಗುರುತಿಸಿ ಅವರಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ತಾಲ್ಲೂಕಿನ ಮುಗಬಾಳ ಪಂಚಾಯಿತಿಯಲ್ಲಿ ಐದು ವೈದ್ಯರ ತಂಡಗಳು ರಚನೆಯಾಗಿವೆ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ನೀಡುವ ಮೂಲಕ ಮಕ್ಕಳಿಗೆ ಸೋಂಕು ಬಾಧಿಸದಂತೆ ಎಚ್ಚರಿಕೆವಹಿಸಲಾಗುತ್ತದೆ ಎಂದರು.
ಇದಕ್ಕೂ ಮೊದಲು ಶಾಸಕರು ಹೋಬಳಿಯ 12 ಗ್ರಾಮಗಳಲ್ಲಿ 1,800ಕ್ಕೂ ಹೆಚ್ಚು ದಿನಸಿ ಕಿಟ್ ವಿತರಿಸಿದರು. ಜಿ.ಪಂ. ಮಾಜಿ ಸದಸ್ಯ ಚನ್ನಸಂದ್ರ ನಾಗರಾಜ್, ನಾಗರಾಜ್, ಕೃಷ್ಣಪ್ಪ, ನಾರಾಯಣಸ್ವಾಮಿ, ಬಸವರಾಜ್, ಲಕ್ಷ್ಮಣ್ ಇದ್ದರು.