ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ‘ಜಗತ್ತಿನಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಸರಾಸರಿ 40ರಿಂದ 45 ವಯಸ್ಸಿನವರೇ ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಮೊದಲು ಶ್ರೀಮಂತರು, ನಗರವಾಸಿಗಳು, ಪುರುಷರು ಹಾಗೂ ಧೂಮಪಾನ ವ್ಯಸನಿಗಳನ್ನಷ್ಟೇ ಕಾಡುತ್ತಿದ್ದ ಈ ಕಾಯಿಲೆ ಇಂದು ಬಡವ, ಶ್ರೀಮಂತ, ಲಿಂಗ ಭೇದವಿಲ್ಲದೆ ಎಳೆಯ ಮಕ್ಕಳು, ರೈತರು ಹಾಗೂ ಮಹಿಳೆಯರನ್ನೂ ಕಾಡುತ್ತಿದೆ. ಹೆಚ್ಚುತ್ತಿರುವ ನಗರೀಕರಣ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಮಾಲಿನ್ಯ, ವ್ಯಾಯಾಮ ಚಟುವಟಿಕೆಗಳಿಲ್ಲದ ಜೀವನ ಶೈಲಿ ಹೃದ್ರೋಗಿಗಳ ಸಂಖ್ಯೆ ಅಧಿಕವಾಗಲು ಕಾರಣವಾಗುತ್ತಿದ್ದು ಜನರು ಜಾಗೃತರಾಗಬೇಕಾಗಿದೆ’ ಎಂದರು.