ದೇವನಹಳ್ಳಿ: ತಾಲ್ಲೂಕಿನ ಸಾವಕನಹಳ್ಳಿಯಲ್ಲಿ ಭಾನುವಾರ ಮಹಾಗಣಪತಿ, ನಾಗದೇವತಾ ಪ್ರತಿಷ್ಠಾಪನೆ, ಅಶ್ವತ್ಥ ಕಲ್ಯಾಣ ಮಹೋತ್ಸವವೂ ಅದ್ದೂರಿಯಾಗಿ ಜರುಗಿತು.
ಗ್ರಾಮದೇವತೆಗಳಾದ ವೇಣುಗೋಪಾಲಸ್ವಾಮಿ, ಅಣ್ಣಮ್ಮ, ಚೌಡೇಶ್ವರಿ, ಗಂಗಮ್ಮ, ದೊಡ್ಡಮ್ಮ, ಸಪ್ಪಲಮ್ಮ, ಮುನೇಶ್ವರ, ಆಂಜನೇಯಸ್ವಾಮಿಗಳ ಉತ್ಸವ ಮೂರ್ತಿಗಳಿಗೆ ಪೂಜೆ ನೇರವೇರಿಸಿ ಉತ್ಸವ ಮಾಡಲಾಯಿತು.
ಆನೆಯ ಮೇಲೆ ನಾಡದೇವತೆ ಅಣ್ಣಮ್ಮ ದೇವಿಯ ಉತ್ಸವ ಮೂರ್ತಿ ಇಟ್ಟು, ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತರು ಗ್ರಾಮಸ್ಥರು ತಾಯಿಯ ದರ್ಶನ ಪಡೆದು ಪುನೀತರಾದರು. ಚಿಣ್ಣರು ಆನೆಯನ್ನು ಕಂಡು ಸಂತಸ ಪಟ್ಟರು.
ವಿವಿಧ ಹೋಮ ಹವನ, ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗ್ರಾಮದ ಅಶ್ವತ್ಥ ಕಟ್ಟೆಯಲ್ಲಿ ನಾಗದೇವತೆಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಕುಂಬಾಭಿಷೇಕ, ಪಂಚಾಮೃತ ಅಭಿಷೇಕದ ನೆರವೇರಿಸಿ, ವಿವಿಧ ಊರುಗಳಿಂದ ಆಗಮಿಸಿದ್ದ ಭಕ್ತರು ಪ್ರಸಾದದ ವ್ಯವಸ್ಥೆ ಮಾಡಲಾಯಿತು.
ಜಾತ್ರೆಯ ಬೊಂಬೆ ಕುಣಿತಕ್ಕೆ, ತಮಟೆ ನಾದನಕ್ಕೆ ಯುವಕರು ಕುಣ್ಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ, ಬಿದಲೂರು ಗ್ರಾಪಂ ಅಧ್ಯಕ್ಷ ಎಸ್.ಪಿ.ಮುನಿರಾಜು, ಚಿನ್ನಪ್ಪ ಸೇರಿದಂತೆ ಗ್ರಾಮದ ಹಿರಿಯರು ಭಾಗವಹಿಸಿದ್ದರು.