ದೇವನಹಳ್ಳಿ: ‘ಕೊರೊನಾ ಸೊಂಕಿನಿಂದ ಕಳೆದ ತಿಂಗಳು ಮೃತಪಟ್ಟಿದ್ದ ಪತ್ರಕರ್ತ ಎಂ.ನಾಗರಾಜ್ ಕುಟುಂಬಕ್ಕೆ ಸಂಸ್ಥೆ ನೀಡಿದ ಭರವಸೆಯನ್ನು ಈಡೇರಿಸಿದೆ’ ಎಂದು ಆದಿ ಜಾಂಬವ ಸೇವಾ ಸಂಸ್ಥೆ ಅಧ್ಯಕ್ಷ ಎಂ.ಎಂ. ಶ್ರೀನಿವಾಸ್ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೇವಾ ಸಂಸ್ಥೆ ವತಿಯಿಂದ ಮೃತನ ಪತ್ನಿ ಜಯಸುಧಾ ಅವರಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ‘ಸೇವಾ ಸಂಸ್ಥೆ ಅಸ್ತಿತ್ವಕ್ಕೆ ಬಂದು ಕೇವಲ ನಾಲ್ಕು ವರ್ಷ ಕಳೆದಿದ್ದರೂ ಮಾನವೀಯ ನೆಲೆಗಟ್ಟಿನಲ್ಲಿ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕಿಂತ ಒಂದಿಟ್ಟು ಹಣ ನೀಡಿದರೆ ಕುಟುಂಬಕ್ಕೆ ನೈತಿಕ ಬಲ ಸಿಗಲಿದೆ ಎಂಬುದನ್ನು ಚಿಂತಿಸಿ ನೀಡಲಾಗುತ್ತಿದೆ’ ಎಂದು ಹೇಳಿದರು.
‘ಮಾನವನ ಅಮೂಲ್ಯ ಜೀವ ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ಹೇಳಲು ಆಗದು. ಕಡುಬಡವರಿಗೆ, ವಯೋವೃದ್ಧರಿಗೆ, ವಿಕಲಚೇತನರಿಗೆ ಮತ್ತು ನೊಂದ ಕುಟುಂಬಗಳಿಗೆ ಅನುಕಂಪ ಪರಿಹಾರವಲ್ಲ. ಸಮಾಜದಲ್ಲಿ ಪ್ರತಿಯೊಂದು ಜೀವಿಗೆ ಬದುಕುವ ಹಕ್ಕಿದೆ. ಸಂಘ ಸಂಸ್ಥೆಗಳು ನೆರವಿಗೆ ಧಾವಿಸಿ ಸಮಾಜಮುಖಿಯನ್ನಾಗಿ ಮಾಡಬೇಕು’ ಎಂದು ಹೇಳಿದರು.
‘ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಯುವ ಸಮುದಾಯವನ್ನು ಜಾಗೃತಗೊಳಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದಿಕ್ಕು ತಪ್ಪುತ್ತಿರುವ ಯುವಸಮುದಾಯವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡದಿದ್ದರೆ ಸಮಾಜದಲ್ಲಿ ಹದಗೆಟ್ಟ ವಾತಾವರಣ ನಿರ್ಮಾಣವಾಗಲಿದೆ’ ಎಂದು ಹೇಳಿದರು.
ಸೇವಾ ಸಂಸ್ಥೆ ನಿರ್ದೇಶಕರಾದ ಶಿವಾನಂದ್, ಎಲ್ ಮುನಿರಾಜು ಮಾತನಾಡಿ, ಆಪ್ತಮಿತ್ರ ಒಡನಾಡಿಯಾಗಿದ್ದ ದಿವಂಗತ ನಾಗರಾಜ್ ಅವರ ಹೆಣ್ಣುಮಗುವಿನ ಶಿಕ್ಷಣ ವೆಚ್ಚವನ್ನು ಸೇವಾ ಸಂಸ್ಥೆ ಭರಿಸಲಿದೆ’ ಎಂದು ಹೇಳಿದರು.
ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ತಿರುಮಲೇಶ್, ಉಪಾಧ್ಯಕ್ಷ ಬೀರಸಂದ್ರ ಯಲ್ಲಪ್ಪ, ಸಹಕಾರ್ಯದರ್ಶಿ ಚಂದ್ರು, ಖಜಾಂಚಿ ನರಸಿಂಹಮೂರ್ತಿ, ನಿರ್ದೇಶಕರಾದ ಬೆಟ್ಟೇನಹಳ್ಳಿ ಮುನಿರಾಜು, ಹರೀಶ್, ಹೇಮಂತ್, ಮೂರ್ತಿ, ನಾಗರಾಜ್ ಇದ್ದರು.