ದೊಡ್ಡಬಳ್ಳಾಪುರ: ಒಂದು ವಾರದಿಂದ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರಾಗಿ, ಮುಸುಕಿನಜೋಳದ ಬೆಳೆಗೆ ಹಾಕುವ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.
ನಗರ ಸೇರಿದಂತೆ ತಾಲ್ಲೂಕಿನ ಎಲ್ಲಾ ರಸಗೊಬ್ಬರ ಮಾರಾಟದ ಅಂಗಡಿಗಳಲ್ಲೂ ಯೂರಿಯಾ ರಸಗೊಬ್ಬರ ದಾಸ್ತಾನು ಖಾಲಿಯಾಗಿದೆ. ನಗರದ ಟಿಎಪಿಎಂಸಿಎಸ್ ಮಾರಾಟ ಮಳಿಗೆಯಲ್ಲಿ ಮಾತ್ರ 29 ಟನ್ ದಾಸ್ತಾನು ಇದ್ದು, ಬುಧವಾರ ಬೆಳಗಿನಿಂದಲೆ ನೂರಾರು ಜನ ರೈತರು ಯೂರಿಯಾ ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ. ಒಬ್ಬ ರೈತರಿಗೆ ಒಂದು ಚೀಲ ಮಾತ್ರ ನೀಡಲಾಗುತ್ತಿದೆ.
ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಮಂಗಳೂರಿನಿಂದ ಯೂರಿಯಾ ತುಂಬಿದ ಗೂಡ್ಸ್ ರೈಲು ಬರುವುದು ವಿಳಂಬವಾಗಿರುವುದರಿಂದ ಇನ್ನೂ ನಾಲ್ಕು ದಿನಗಳ ಒಳಗೆ 150 ಟನ್ ಬರಲಿದೆ. ಸದ್ಯಕ್ಕೆ ದಾಸ್ತಾನು ಕೊರತೆ ಉಂಟಾಗಿದೆ. ಈ ಬಗ್ಗೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕು ತರಲಾಗಿದೆ ಎಂದು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಟಿಎಪಿಎಂಸಿಎಸ್ ರಸಗೊಬ್ಬರ ಮಾರಾಟ ಮಳಿಗೆ ಮುಂದೆ ಯೂರಿಯಾ ರಸಗೊಬ್ಬರ ಖರೀದಿಸಲು ನೂರಾರು ಜನ ರೈತರು ಸಾಲುಗಟ್ಟಿ ನಿಂತಿರುವುದು