ದೇವನಹಳ್ಳಿ: ‘ಸಾಹಿತಿಗಳು, ಕಲಾವಿದರು, ಕನ್ನಡಪರ ಸಂಘ ಸಂಸ್ಥೆಗಳನ್ನು ಕಳ್ಳರು, ಸುಳ್ಳರು ಎಂದು ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಕ್ಷಮೆ ಯಾಚಿಸಬೇಕು’ ಎಂದು ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ್ ಒತ್ತಾಯಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಶತಮಾನಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿದಿರುವುದು ಲಕ್ಷಾಂತರ ಕಲಾವಿದರು ಮತ್ತು ಪ್ರಗತಿಪರ ಕನ್ನಡ ಸಂಘಟನೆಗಳ ಪರಿಶ್ರಮದಿಂದಲೇ ಹೊರತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಂದಲ್ಲ. ಇಲಾಖೆ ನೀಡುತ್ತಿರುವುದು ಪ್ರೋತ್ಸಾಹ ಧನವಷ್ಟೇ. ಇಲಾಖೆ ಅನುಸರಿಸುತ್ತಿರುವ ನೀತಿ ನಿಯಮಗಳು, ಕಲಾವಿದರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಕಲಾವಿದರನ್ನು ಮೂಲೆಗುಂಪು ಮಾಡುತ್ತಿವೆ. ಇಂತಹ ವಾತಾವರಣ ಸಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಲಾವಿದ ರಾಮಚಂದ್ರ ಮಾತನಾಡಿ, ‘ಸಚಿವರು ತೆಗೆದುಕೊಂಡಿರುವ ನಿರ್ಧಾರ ಸಾಂಸ್ಕೃತಿಕ ಕ್ಷೇತ್ರವನ್ನು ಹಾಳು ಮಾಡುವಂತಿದೆ. ಪರಂಪರೆಯ ಕಲಾ ಸಂಪತ್ತು ಉಳಿಯಬೇಕಾದರೆ ಇಲಾಖೆ ನೀಡಿರುವ ಮಾರ್ಗಸೂಚಿಯನ್ನು ಸರಳಗೊಳಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆ ನಡೆಸಿದ ಕಲಾವಿದರು ಹೆಚ್ಚುವರಿ ಜಿಲ್ಲಾಧಿಕಾರಿ ರಮ್ಯ ಅವರಿಗೆ ಮನವಿ ಸಲ್ಲಿಸಿದರು.ಕಲಾವಿದರಾದ ನಾಗೇಶ್, ರಾಜಶೇಖರ್, ರಂಗನಾಥ್, ಶಿವಮ್ಮ ಇದ್ದರು.