ವಿಜಯಪುರ:ಚನ್ನರಾಯಪಟ್ಟಣ ಹೋಬಳಿಯ ರೈತರಿಂದ ಕೆಐಎಡಿಬಿಯು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಬುಧವಾರ 17ನೇ ದಿನ ಕಾಲಿಟ್ಟಿದ್ದು, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ವಿಜಯಕುಮಾರ್ ಹಾಗೂ ತಹಶೀಲ್ದಾರ್ ಶಿವರಾಜ್ ಭೇಟಿ ನೀಡಿ ಮಾತುಕತೆ ನಡೆಸಿದರು.
ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ. ಕೃಷಿ ಭೂಮಿ ಕೈಬಿಟ್ಟು ನಿಮಗೆ ಕೈಗಾರಿಕೆಗಳಿಗೆ ಅನುಕೂಲಕರವಾಗಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ನಾವು ಭಾವನಾತ್ಮಕವಾಗಿ ಜೀವನ ರೂಪಿಸಿಕೊಂಡಿರುವ ಭೂಮಿಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ವಿಶೇಷ ಭೂಸ್ವಾಧೀನಾಧಿಕಾರಿ ವಿಜಯಕುಮಾರ್ ಮಾತನಾಡಿ, ಕೈಗಾರಿಕೆಗಳ ಸ್ಥಾಪನೆ ಅಭಿವೃದ್ಧಿಗೆ ಎಷ್ಟು ಮುಖ್ಯವೋ, ಅನ್ನ ಕೊಡುವ ರೈತರು ಕೂಡ ಅಷ್ಟೇ ಮುಖ್ಯವಾಗಿದ್ದಾರೆ. ಆದರೆ, ಅಭಿವೃದ್ಧಿಗೆ ತಾವೆಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತಿದ್ದಂತೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
‘ಅಭಿವೃದ್ಧಿಗೆ ನಾವು ವಿರೋಧಿಸಿಲ್ಲ. ಆದರೆ, ಭೂಮಿ ಕಿತ್ತುಕೊಂಡರೆ ನಾವು ಉಳಿಯುವುದು ಹೇಗೆ, ನಮ್ಮ ಮಕ್ಕಳು, ಕುಟುಂಬಗಳು ಜೀವನ ನಡೆಸುವುದು ಹೇಗೆ, ಕೃಷಿ ಮಾಡುತ್ತಿರುವ ಭೂಮಿಗಳೊಂದಿಗೆ ನಮ್ಮ ಜೀವ ಬೆಸೆದುಕೊಂಡಿದೆ. ಆದ್ದರಿಂದ ನಮಗೆ ಮುಖ್ಯಮಂತ್ರಿ ಬಳಿಗೆ ಹೋಗಲಿಕ್ಕೆ ಅವಕಾಶ ಮಾಡಿಕೊಡಬೇಕು. ನೇರವಾಗಿ ಅವರ ಬಳಿಯಲ್ಲಿ ಸಂಕಷ್ಟ ಹೇಳಿಕೊಳ್ಳುತ್ತೇವೆ’ ಎಂದು ರೈತರು ಪಟ್ಟುಹಿಡಿದರು.
ಶೀಘ್ರವೇ ಕೈಗಾರಿಕಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿಸಿ ಮಾತುಕತೆ ನಡೆಸಲು ಅವಕಾಶ ಮಾಡಿಕೊಡಲಾಗುವುದು. ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ಯಾರಂಟಿ ರಾಮಣ್ಣ ಮತ್ತು ತಂಡದಿಂದ ಭೂಸ್ವಾಧೀನಕ್ಕೆ ಒಳಪಡುತ್ತಿರುವ ಹಳ್ಳಿಗಳಲ್ಲಿ ಭೂಮಿ ಕಳೆದುಕೊಂಡಿರುವವರ ಸ್ಥಿತಿಗತಿ ಕುರಿತು ಜನರಿಗೆ ಜಾಗೃತಿ ಮೂಡಿಸಲು ಬೀದಿನಾಟಕ ಪ್ರದರ್ಶನ ನಡೆಯಿತು.