ದೇವನಹಳ್ಳಿ: ನಾಲ್ಕು ತಾಲ್ಲೂಕಿನ ಮಧ್ಯ ಭಾಗದ ಚಪ್ಪರದ ಕಲ್ಲು ಬಳಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮಾಂತರ ಜಿಲ್ಲೆ ಸ್ಥಾನ ಕೇಂದ್ರ ಬಗ್ಗೆ ಗೊಂದಲ ಹೇಳಿಕೆ ನೀಡುವುದು ಸರಿಯಲ್ಲ ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ.ಶಿವಪ್ಪ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ, ಈಚೆಗೆ ದೊಡ್ಡಬಳ್ಳಾಪುರದಲ್ಲಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ, ಸಚಿವ ಎಂ.ಟಿ.ಬಿ ನಾಗರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್, ಜಿಲ್ಲಾ ಕೇಂದ್ರ ಸ್ಥಾನ ದೊಡ್ಡಬಳ್ಳಾಪುರ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂಬ ರೀತಿಯಲ್ಲಿ ಪರೋಕ್ಷವಾಗಿ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಹೇಳಿಕೆ ನೀಡಿರುವ ಸಚಿವರಿಗೆ, ವಿಧಾನ ಪರಿಷತ್ ಸದಸ್ಯೆಗೆ ಮಾಹಿತಿ ಕೊರತೆ ಇರಬಹುದು. ಜಿಲ್ಲಾ ಕೇಂದ್ರ ರಚನೆಗೆ ಅನುಸರಿಸಿರುವ ಮಾನದಂಡದ ಕಡತಗಳು ಆಡಳಿತ ಸರ್ಕಾರದ ಮಟ್ಟದಲ್ಲೇ ಇದೆ. ಇದನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಹೇಳಿಕೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದರು.
ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸದಸ್ಯರಾದ ಡಾ.ಮೂರ್ತಿ, ಎ.ಚಂದ್ರಶೇಖರ್, ಬಚ್ಚಹಳ್ಳಿ ವೆಂಕಟೇಶ್, ಬಿ.ಜಿ.ಗುರುಸಿದ್ದಯ್ಯ ಮಾತನಾಡಿ, ಗ್ರಾಮಾಂತರ ಜಿಲ್ಲೆಯಿಂದ ನಗರಕ್ಕೆ ಹೋಗಿಬರಲು ಸಂಕಷ್ಟವಾಗುತ್ತದೆ ಎಂದು ಸತತ ಎರಡು ವರ್ಷ ಹೋರಾಟ ಮತ್ತು 48 ದಿನ ಹಗಲು ರಾತ್ರಿ ವಿಭಿನ್ನ ಪ್ರತಿಭಟನೆ ನಡೆಸಿದ ಪರಿಣಾಮ 2014ರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜಿಲ್ಲಾಉಸ್ತುವಾರಿ ಸಚಿವ ಕೃಷ್ಣಭೈರೇಗೌಡ, ಜಿಲ್ಲೆಯ ನಾಲ್ಕು ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು ಒಮ್ಮತದಿಂದ ನಿರ್ಣಯಿಸಿ ಜಿಲ್ಲಾ ಕೇಂದ್ರ ಘೋಷಣೆ ಮಾಡಿ ಜಿಲ್ಲಾ ಕೇಂದ್ರ ಕಟ್ಟಡಕ್ಕೆ ₹43ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಈ ಗೊಂದಲ ಸೃಷ್ಟಿಸುವ ಕೆಲಸ ಮಾಡ ಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ಸದಸ್ಯರಾದ ವೆಂಕಟರಾಜು, ವಿನೋದ್ ಗೌಡ, ಹಿತ್ತರಹಳ್ಳಿ ರಮೇಶ್, ರಾಮಾಜಿನಪ್ಪ, ನಾಗರಾಜು, ಮಂಜುನಾಥ್, ಬಿ.ಎಸ್.ಕೃಷ್ಣಪ್ಪ, ಶಿವಕುಮಾರ್, ಸೂರ್ಯಕಲಾ ಇದ್ದರು.