ಆನೇಕಲ್:ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ನೇಚರ್ ವಾಕ್ (ಪರಿಸರ ನಡಿಗೆ) ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪರಿಸರ ನಡಿಗೆಯನ್ನು ಉದ್ಘಾಟಿಸಿದ ಉದ್ಯಾನದ ಉಪ ನಿರ್ದೇಶಕ ಹರೀಶ್ ಮಾತನಾಡಿ, ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮೂಲಕ ಜನರಲ್ಲಿ ಪ್ರಾಣಿಗಳ ಬಗ್ಗೆ ಪ್ರೀತಿ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು, ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿನ ಪ್ರಾಣಿ, ಪಕ್ಷಿಗಳ ವೈವಿಧ್ಯತೆ ತಿಳಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಪರಿಸರ ತಜ್ಞರಾದ ಕೆ.ಸಿ. ಮಹದೇಶ್, ಗೋಪಿನಾಥ್, ಸೌರವ್ ಗುಪ್ತಾ, ಮಂಜುನಾಥ್ ಓಲೇಕಾರ್, ಬಂಗಾರುಸ್ವಾಮಿ ಅವರು ಪರಿಸರ ನಡಿಗೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಪರಿಸರದಲ್ಲಿನ ಗಿಡ, ಮರಗಳು, ಪ್ರಾಣಿ, ಪಕ್ಷಿಗಳ ಬಗ್ಗೆ ತಿಳಿಸಿಕೊಟ್ಟರು.
‘ಬೆಳಿಗ್ಗೆ 6.30ಕ್ಕೆ ಪ್ರಾರಂಭಗೊಂಡ ನಡಿಗೆ 9ಗಂಟೆಯವರೆಗೂ ಅರಣ್ಯದಲ್ಲಿ ನಡೆಯಿತು. ಪಾಲ್ಗೊಂಡಿದ್ದ ಸಾರ್ವಜನಿಕರು ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಪಡೆದರು’ ಎಂದು ವಲಯ ಅರಣ್ಯಾಧಿಕಾರಿ ದಿನೇಶ್ ತಿಳಿಸಿದರು.