ದೇವನಹಳ್ಳಿ: ಇಲ್ಲಿನ ಬೊಮ್ಮವಾರದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕ ಸೋಮಶೇಖರ್ ಮಾತನಾಡಿ, 2014ರ ಜ. 24ರಿಂದ ಪ್ರಸಕ್ತ ಚುನಾವಣೆವರೆಗೆ ಡೇರಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಇದೇ ಮೊದಲ ಬಾರಿಗೆ ಸರ್ವಸದಸ್ಯರ ಸಭೆಯಲ್ಲಿ ಒಮ್ಮತದ ಆಯ್ಕೆಗೆ ತೀರ್ಮಾನ ಮಾಡಲಾಗಿತ್ತು. ಮೀಸಲಾತಿ ಅನ್ವಯ ಎಸ್ಟಿ ಸ್ಥಾನ ಹೊರತುಪಡಿಸಿ ಇತರೆ ಪ್ರವರ್ಗಗಳಿಂದ ಒಟ್ಟು 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಿದವರ ಮನವೊಲಿಸಿ ಅವರೇ ಬೆಂಬಲ ಸೂಚಿಸಿದ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಪ್ರಸ್ತುತ ಸಂಘದಲ್ಲಿ 285 ಸದಸ್ಯರಿದ್ದಾರೆ. ಪ್ರತಿದಿನ ಸರಾಸರಿ ಒಂದು ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆಯುವ ವಿಶ್ವಾಸವಿದೆ ಎಂದು ಹೇಳಿದರು.
ಆಯ್ಕೆಯಾದ ನಿರ್ದೇಶಕರು: ರವಿಕುಮಾರ್, ಸೋಮಶೇಖರ್, ಎಸ್. ರಾಮಾಂಜಿನಪ್ಪ, ನಂಜೇಗೌಡ, ಮುನಿನಾರಾಯಣಪ್ಪ, ಬಿ.ಎನ್. ನಾರಾಯಣಪ್ಪ, ಬಿ.ಎಚ್. ನಾರಾಯಣಸ್ವಾಮಿ, ನರಸಿಂಹಪ್ಪ, ಅಚ್ಚಪ್ಪ, ಭಾಗ್ಯಮ್ಮ, ದ್ಯಾವಮ್ಮ, ಶಕುಂತಲಾ ಆಯ್ಕೆಯಾಗಿದ್ದಾರೆ.