ಆನೇಕಲ್ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಆಹಾರ ಅರಸಿ ಮರಿಗಳ ಸಮೇತ ಸೋಮವಾರದಿಂದ ಆನೇಕಲ್ ಬಳಿ ಬೀಡುಬಿಟ್ಟಿದ್ದಕಾಡಾನೆಗಳ ಹಿಂಡನ್ನು ಅರಣ್ಯ ಅಧಿಕಾರಿಗಳು ಮರಳಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮೂರು ಮರಿಗಳೊಂದಿಗೆ ಬಂದ 31 ಕಾಡಾನೆಗಳ ಹಿಂಡು ಬೆಳಗಾದರೂ ಕಾಡಿನತ್ತ ತೆರಳದೆಮೆಣಸಿಗನಹಳ್ಳಿಯ ನೀಲಗಿರಿ ತೋಪುಗಳಲ್ಲಿ ಬಿಡಾರ ಹೂಡಿತ್ತು. ರಾತ್ರಿ ಸುತ್ತಮುತ್ತಲ ಜಮೀನಿನಲ್ಲಿದ್ದ ಚಪ್ಪರ ಬದನೆ, ಟೊಮೆಟೊ, ರಾಗಿ ಮೆದೆಯನ್ನು ತಿಂದು ಹಾಕಿವೆ.
ಸುದ್ದಿ ತಿಳಿದ ಸುತ್ತಮುತ್ತಲ ಗ್ರಾಮಗಳ ಜನರು ಗುಂಪುಗುಂಪಾಗಿ ತೋಪಿನ ಬಳಿ ಜಮಾಯಿಸಿದ್ದರಿಂದ ಬೆದರಿದ ಹಿಂಡು ಮರಿಗಳೊಂದಿಗೆ ಅತ್ತಿಂದಿತ್ತ ಓಡಾಡತೊಡಗಿತು. ಮೊಬೈಲ್ನಲ್ಲಿ ವಿಡಿಯೊ ಮತ್ತು ಚಿತ್ರ ತೆಗೆಯಲು ಮುಂದಾದ ಜನರತ್ತ ನುಗ್ಗಿ ಹೋದವು.
ಆನೆಗಳ ಹಿಂಡಿಗಿಂತ ಜನರ ಗುಂಪು ನಿಭಾಯಿಸುವುದೇ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗೆ ಸವಾಲಾಗಿತ್ತು. ಸಂಜೆ ವೇಳೆಗೆ ಪಟಾಕಿ ಸಿಡಿಸಿ ಆನೆಗಳ ಹಿಂಡನ್ನು ತಮಿಳುನಾಡಿನ ಗುಮ್ಮಳಾಪುರ ಕಾಡಿನತ್ತ ಓಡಿಸಲಾಯಿತು.