ಸೂಲಿಬೆಲೆ: ವಿದ್ಯಾರ್ಥಿ ಮಾನವೀಯ ಮೌಲ್ಯ ರೂಡಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಸ್ಕೌಟ್ ಅಂಡ್ ಗೈಡ್ಸ್ನ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್ ಹೇಳಿದರು.
ಸೂಲಿಬೆಲೆ ಜನತಾ ಕಾಲೊನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಗೈಡ್ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮಕ್ಕಳಲ್ಲಿ ಸೇವಾ ಮನೋಭಾವ, ಮೌಲ್ಯಗಳು ಮತ್ತು ಸಾಮಾಜಿಕ ಕಳಕಳಿ ಮೂಡಿಸುವ ಉದ್ದೇಶದಿಂದ 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಕಬ್ ಮತ್ತು ಬುಲ್ ಬುಲ್ ಎಂಬ ದಳಗಳನ್ನು ಮಾಡಿಕೊಳ್ಳಲಾಗಿದೆ. ಸೇವೆಯೇ ಸ್ಕೌಟ್ನ ಪ್ರಧಾನ ಆಶಯವಾಗಿದೆ’ ಎಂದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಅಶ್ವತ್ಥ್ ಮಾತನಾಡಿ, ‘ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದೆ. ನಮ್ಮ ಮನೆ ಮತ್ತು ನಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮನೋಭಾವ ಮೂಡಿದರೆ ನಾಡು ಮತ್ತು ದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ’ ಎಂದರು.
ಮುಖ್ಯ ಶಿಕ್ಷಕ ರಾಮನಗೌಡ, ಗೈಡ್ ಕ್ಯಾಪ್ಟನ್ ಪ್ರಭಾವತಿ, ಶಾಲಾಭಿವೃದ್ಧಿ ಅಧ್ಯಕ್ಷೆ ದೀಪಾ ಶಿವರಾಜ, ಉಪಾಧ್ಯಕ್ಷ ಸಿರಾಜ್, ಸಹ ಶಿಕ್ಷಕರಾದ ಶೈಲಜಾ, ಸನಾವುಲ್ಲಾ, ಗುರುರಾಜ್, ಪದ್ಮಿನಿ ಹಾಗೂ ಗೈಡ್ ಜಿಲ್ಲಾ ಘಟಕದ ಅರುಣ್ ಕುಮಾರ್ ಇದ್ದರು.