ಕನಕಪುರ: ಹೈನುಗಾರಿಕೆ ರೈತರ ಉತ್ತೇಜನಕ್ಕಾಗಿ ಸರ್ಕಾರ ನೀಡುತ್ತಿರುವ ಪ್ರತಿ ಲೀಟರ್ಗೆ ₹5 ಕಳೆದ 10 ತಿಂಗಳಿನಿಂದ ನೀಡದೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡಳ್ಳಿ ಅನುಕುಮಾರ್ ಆರೋಪಿಸಿದರು.
ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಭಾನುವಾರ ನಡೆಸಿದ ರೈತ ಸಂಘದ ಸಭೆಯಲ್ಲಿ ಮಾತನಾಡಿದರು.
ಹಿಂದಿನ ಸರ್ಕಾರ ಸಮಯಕ್ಕೆ ಸರಿಯಾಗಿ ಹೈನುಗಾರಿಕೆ ರೈತರಿಗೆ ಪ್ರೋತ್ಸಾಹ ಧನ ಬರುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 10 ತಿಂಗಳಿನಿಂದ ಪ್ರೋತ್ಸಾಹ ಧನ ನೀಡಿಲ್ಲ ಎಂದು ದೂರಿದರು.
ಪಶುಗಳ ಆಹಾರದ ಬೆಲೆ ದುಬಾರಿಯಾಗಿದೆ. ಬೇಸಿಗೆ ಕಾರಣದಿಂದ ಹಾಲಿನ ಪ್ರಮಾಣ ಕಡಿಮೆ ಆಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ₹5 ಪ್ರೋತ್ಸಾಹಧನ ರೈತರ ಕೈ ಹಿಡಿಯುತ್ತಿತ್ತು. ಈಗ ಸರ್ಕಾರ 10ತಿಂಗಳಿನಿಂದ ಹಣ ಹಾಕದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡಿದೆ ಎಂದು ಹೇಳಿದರು.
ಸರ್ಕಾರಕ್ಕೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಕೂಡಲೇ ತಾನು ಬಾಕಿ ಉಳಿಸಿಕೊಂಡಿರುವ ಹಣ ಶೀಘ್ರವಾಗಿ ನೀಡಬೇಕೆಂದು ಒತ್ತಾಯಿಸಿದರು.