ದೊಡ್ಡಬಳ್ಳಾಪುರ: ನಗರದ ಪ್ರವಾಸಿ ಮಂದಿರ ಕಾಂಪೌಂಡ್ ಸಮೀಪ ನಾಡಪ್ರಭು ಕೆಂಪೇಗೌಡ ಮತ್ತು ಕುವೆಂಪು ಅವರ ಪುತ್ಥಳಿ ನಿರ್ಮಾಣ ಮಾಡುವಲ್ಲಿ ನಗರಸಭೆ ಆಡಳಿತ ಅನುಮೋದನೆ ನೀಡಿದೆ. ಹೀಗಾಗಿ ಜೂನ್ 27ರ ಕೆಂಪೇಗೌಡ ಜಯಂತಿಯಂದು ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲು ಗುರುವಾರ ನಡೆದ ಪೂರ್ವಬಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಎಂದು ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ಅಧ್ಯಕ್ಷ ಎನ್.ಹನುಮಂತೇಗೌಡ, ‘ಎರಡು ವರ್ಷಗಳ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರವಾಸಿ ಮಂದಿರದ ಕಾಂಪೌಂಡ್ ಬಲ ಭಾಗದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ಎಡಭಾಗದಲ್ಲಿ ರಾಷ್ಟ್ರ ಕವಿ ಕುವೆಂಪು ಪ್ರತಿಮೆ ಸ್ಥಾಪನೆಗೆ ನಗರಸಭೆ ಅನುದಾನದಲ್ಲಿ ಸ್ಥಾಪಿಸುವುದಾಗಿ ಅನುಮೋದನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪುತ್ಥಳಿಗಳನ್ನು ಸ್ಥಾಪಿಸುವಲ್ಲಿ ಒಕ್ಕಲಿಗ ಸಮುದಾಯವೇ ಅಲ್ಲದೆ ಜಾತ್ಯತೀತವಾಗಿ ಪ್ರತಿಮೆ ಸ್ಥಾಪಿಸುವಲ್ಲಿ ತಾಲ್ಲೂಕಿನ ಜನತೆ ಸಹಕಾರವನ್ನು ನೀಡಬೇಕು’ ಎಂದು ಮನವಿ ಮಾಡಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ನಾಡಪ್ರಭು ಕೆಂಪೇಗೌಡ ಸಾಮಾಜಿಕವಾಗಿ, ಜಾತ್ಯತೀತವಾಗಿ ಬೆಂಗಳೂರನ್ನು ಕಟ್ಟಿದರು. ಅಲ್ಲದೆ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲೂ ಅವರ ಕುಟುಂಬಗಳು ದಕ್ಷ ಆಡಳಿತ ನೀಡಿರುವ ಗುರುತುಗಳು ಇವೆ. ಇಂದು ಸಮೃದ್ಧ ಬೆಂಗಳೂರಿನಲ್ಲಿ ಇದ್ದೇವೆ’ ಎಂದರೆ ಅದು ಕೆಂಪೇಗೌಡರ ಕೊಡುಗೆ ಆಗಿದೆ. ಹೀಗಾಗಿ ಸಮಾಜಕ್ಕೆ ಜಾತ್ಯತೀತವಾಗಿ ಸಲ್ಲಬೇಕಾದ ಕೆಂಪೇ ಗೌಡ ಹಾಗೂ ಕನ್ನಡ ಸಾಹಿತ್ಯವನ್ನು ರಾಷ್ಟ್ರಮಟ್ಟಕ್ಕೆ ಒಯ್ದ ಕುವೆಂಪು ಅವರ ಪುತ್ಥಳಿ ನಿರ್ಮಾಣ ಸ್ವಾಗತಾರ್ಹ. ಪ್ರತಿಮೆ ನಿರ್ಮಾಣಕ್ಕೆ ಈಗ ಮಂಜೂರಾಗಿರುವ ಸ್ಥಳ ಸೂಕ್ತವಾಗಿದೆ’ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಟಿ.ವಿ.ಲಕ್ಷ್ಮಿನಾರಾಯಣ್ ಮಾತನಾಡಿ, ‘ತಾಲ್ಲೂಕಿನ ಒಕ್ಕಲಿಗ ಸಮುದಾಯದ ಪ್ರತಿಯೊಬ್ಬರು ಪುತ್ಥಳಿ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡುವ ಮೂಲಕ ಕೆಂಪೇಗೌಡ ಮತ್ತು ಕುವೆಂಪು ಪುತ್ಥಳಿ ನಿರ್ಮಾಣ ಇತಿಹಾಸ ಸೃಷ್ಟಿಸುತ್ತದೆ’ ಎಂದರು.
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಬಿ.ಮುನೇಗೌಡ ಮಾತನಾಡಿ, ‘ರಾಜ್ಯ ಒಕ್ಕಲಿಗರ ಸಂಘದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ 13 ಸಾವಿರ ಒಕ್ಕಲಿಗರು ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲಾ ಸದಸ್ಯರನ್ನು ಪುತ್ಥಳಿ ನಿರ್ಮಾಣಕ್ಕೆ ಬಳಸಿಕೊಳ್ಳುವ ಕಾರ್ಯ ಆಗಬೇಕಿದೆ’ ಎಂದರು.
ಸಭೆಯಲ್ಲಿ ಸಮುದಾಯದ ಮುಖಂಡರಾದ ಸಿ.ಡಿ.ಸತ್ಯನಾರಾಯಣಗೌಡ, ಎ.ನರಸಿಂಹಯ್ಯ,ಆರ್.ಚಿದಾನಂದ್, ನಾಗೇಶ್, ಟಿ.ಎನ್.ನಾಗರಾಜು, ಲಕ್ಷ್ಮಿಪತಯ್ಯ ಇದ್ದರು.