ಹೊಸಕೋಟೆ: ಬಿಸಿಲು, ದಗೆ ಹೆಚ್ಚಾಗುತ್ತಿದ್ದು, ಜನರು ತಮ್ಮ ದಣಿವಾರಿಸಿಕೊಳ್ಳಲು ಎಳೆನೀರು, ಕಲ್ಲಂಗಡಿ, ಮಜ್ಜಿಗೆ ಸೇರಿದಂತೆ ತಂಪು ಪಾನಿಯಗಳ ಮೊರೆ ಹೋಗುತ್ತಿದ್ದು, ಎಳೆನೀರು ಮತ್ತು ಕಲ್ಲಂಗಡಿಯ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿದೆ.
ಸಾಮಾನ್ಯವಾಗಿ ಎಳೆನೀರಿಗೆ ಔಷಧೀಯ ಗುಣವಿರುವ ಕಾರಣ ಬಹುತೇಕರು ಎಳೆನೀರು ಕುಡಿಯುವುದು ವಾಡಿಕೆ. ಆದರೆ ಬೇಸಿಗೆಯ ಸಂದರ್ಭದಲ್ಲಿ ವಿವಿಧ ಬಗೆಯ ತಂಪು ಪಾನಿಯಗಳ ಬದಲು ಆರೋಗ್ಯದ ಹಿತದೃಷ್ಟಿಯಿಂದ ಎಳೆನೀರನ್ನೇ ಕುಡಿಯಲು ಮುಂದಾಗುತ್ತಿದ್ದು, ₹30 ಎಳೆನೀರು ಇದೀಗ ₹35-₹40ಗೆ ಏರಿಕೆಯಾಗಿದೆ.
ಬೇಸಿಗೆಯ ಸಂದರ್ಭದಲ್ಲಿ ಮಾತ್ರ ತೋಟದ ಮಾಲಿಕರು ಬೆಲೆ ಹೆಚ್ಚಳ ಮಾಡುತ್ತಾರೆ. ನಮಗೂ ಒಂದಷ್ಟು ಗಿಟ್ಟಬೇಕು, ಆದ್ದರಿಂದ ನಾವು ಅನಿವಾರ್ಯವಾಗಿ ಬೆಲೆ ಹೆಚ್ಚಳ ಮಾಡಲೇಬೇಕಾಗುತ್ತದೆ. ಬೇಸಿಗೆಯಾದ ಕಾರಣ ಒಂದಷ್ಟು ಹೆಚ್ಚು ವ್ಯಾಪಾರವೂ ಆಗುತ್ತದೆ ಎನ್ನುತ್ತಾರೆ ಎಳೆನೀರು ವ್ಯಪಾರಿ ರಮೇಶ್.
ಎಳೆನೀರಿನ ಜೊತೆಗೆ ಕಲ್ಲಂಗಡಿಗೂ ಬೇಡಿಕೆ ಹೆಚ್ಚಾಗಿದ್ದು, ಕಲ್ಲಂಗಡಿ ಹಣ್ಣಿನ ಬೆಲೆಯಲ್ಲಿಯೂ ಕೆಜಿ ₹30 ಆಗಿದೆ. ಅಲ್ಲದೆ ಒಂದು ಸಣ್ಣ ತುಂಡಿಗೆ ₹20 ನಿಗದಿ ಮಾಡಲಾಗಿದೆ. ಬೇಸಿಗೆಯ ದಗೆ ದೇಹ ಮಾತ್ರವಲ್ಲ ಜೇಬನ್ನೂ ಬಿಸಿ ಮಾಡುತ್ತಿದೆ.
ಬೇಸಿಗೆಯ ಸಂದರ್ಭದಲ್ಲಿ ದೇಹ ಹೆಚ್ಚಿನ ದ್ರವ ಪದಾರ್ಥ ಬಯಸುತ್ತದೆ. ಆರೋಗ್ಯ ಕೆಡಿಸುವ ಸಿದ್ಧ ತಂಪು ಪಾನಿಯ ಕುಡಿಯುವ ಬದಲು ಆರೋಗ್ಯದ ದೃಷ್ಠಿಯಲ್ಲಿ ಒಳ್ಳೆಯದಾದ ಎಳೆನೀರು, ಕಲ್ಲಂಗಡಿ, ಹಣ್ಣಿನ ರಸ ಕುಡಿಯುವುದು ಉತ್ತಮ ಎನ್ನುತ್ತಾರೆ ಸ್ಥಳೀಯ ಚಂದ್ರಣ್ಣ.